DAKSHINA KANNADA
ಅಪ್ರಾಪ್ತ ದಲಿತ ಬಾಲಕಿಗೆ ಅತ್ಯಾಚಾರಗೈದು ಗರ್ಭವತಿ ಮಾಡಿದ ಆರೋಪಿ ಕುದ್ಕಾಡಿ ನಾರಾಯಣ ರೈ ನ್ಯಾಯಾಲಯದ ಮುಂದೆ ಶರಣು
ಪುತ್ತೂರು ಅಕ್ಟೋಬರ್ 27: ಪುತ್ತೂರು ತಾಲೂಕಿನ ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಗೆ ಅತ್ಯಾಚಾರಗೈದು ಗರ್ಭಧಾರಣೆಗೆ ಕಾರಣನಾದ ಪ್ರಮುಖ ಆರೋಪಿ ಕುದ್ಕಾಡಿ ನಾರಾಯಣ ರೈ ಇಂದು ಪುತ್ತೂರಿನ ನ್ಯಾಯಾಲಯಕ್ಕೆ ಶರಣರಾಗಿದ್ದಾರೆ.
ಬಡಗನ್ನೂರಿನ 17ರ ಹರೆಯದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯು ಸೆಪ್ಟೆಂಬರ್ 5 ರಂದು ಮಗುವಿಗೆ ಜನ್ಮ ನೀಡಿದ್ದರು . ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂದರ್ಭ ಸಂತ್ರಸ್ತೆಯ ಸಹೋದರನನ್ನೆ ಈ ಪ್ರಕರಣದ ಆರೋಪಿ ಎಂದು ಬಂಧಿಸಲಾಗಿತ್ತು. ಆದರೆ ಸೆಪ್ಟೆಂಬರ್ 23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು ಅದರಲ್ಲಿ ಕುದ್ಕಾಡಿ ನಾರಾಯಣ ರೈಯವರೇ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಈ ನಡುವೆ ಆರೋಪಿ ನಾರಾಯಣ ರೈ ಬಂಧನದ ಬೀತಿಯಿಂದ ನಾಪತ್ತೆಯಾಗಿದ್ದು, ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯ ವಿಳಂಬ ನೀತಿ ವಿರುದ್ದ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು.
ಈ ನಡುವೆ ಆರೋಪಿ ನಾರಾಯಣ ರೈ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಆ ಬಳಿಕ ಅವರು ಅಡಗಿಕೊಂಡಿದ್ದರು ಎಂದು ಶಂಕಿಸಲಾಗಿದ್ದ ಈಶ್ವರಮಂಗಲದ ಮನೆಯೊಂದರ ಯಜಮಾನನ ಮನೆಗೆ ಪೋಲಿಸರು ನೊಟೀಸ್ ಜಾರಿ ಮಾಡಿದ್ದರು ಎಂದು ಹೇಳಲಾಗತ್ತಿದೆ. ಬಳಿಕದ ಬೆಳವಣಿಗೆಯಲ್ಲಿ ನಾರಾಯಣ ರೈಯವರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾಗಿದ್ದಾರೆ.
ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅರೋಪಿ ನಾರಾಯಣ ರೈ ಕುದ್ಕಾಡಿ ಎರಡು ದಿನ ಪೋಲೀಸ್ ಕಸ್ಟಡಿಗೆ ನೀಡಿದ್ದಾರೆ.
You must be logged in to post a comment Login