ನೆಡುಮಂಗಡ್ ಜೂನ್ 01: ಇಡೀ ದೇಶವನ್ನೆ ಬೆಚ್ಚಿಬಿಳಿಸಿದ ಕೇರಳದ ಒಂದೂವರೆ ವರ್ಷದ ಮಗು ಆರ್ಶಿತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ನಿಷ್ಕ್ರೀಯತೆಯ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಮಗು ಅರ್ಶಿತ್ನ ಸಾವಿಗೆ ಕಾರಣವಾದ ಆರೋಪಿ ಕ್ರಿಮಿನಲ್ ಅಶ್ಕರ್ ವಿರುದ್ಧ ಪದೇ ಪದೇ ದೂರುಗಳು ಬಂದಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ನೆಡುಮಂಗಡ್ ಪೊಲೀಸರ “ಉದಾಸೀನತೆ” ಮತ್ತು ನಿಷ್ಕ್ರಿಯತೆಯನ್ನು ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಿಂದು ಕೃಷ್ಣ ಅವರು ಖಂಡಿಸಿದ್ದಾರೆ.

ಅಶ್ಕರ್ನ ಭೀಕರ ಕ್ರೌರ್ಯಗಳಿಗೆ ಬಲಿಯಾಗಿ ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಬಳಿಯ ಪುನರ್ವಸತಿ ಕೇಂದ್ರದಲ್ಲಿ ಚೇತರಿಸಿಕೊಳ್ಳುತ್ತಿರುವ ಅಶ್ಕರ್ನ ಮೊದಲ ಪತ್ನಿ ಅಮೀನಾ ಅವರನ್ನು ಭೇಟಿ ಮಾಡಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸರ ಈ ಬೇಜವಾಬ್ದಾರಿತನದ ವಿರುದ್ಧ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರಿಗೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮೇ 29 ರಂದು ನಿಧನರಾದ ಪುಟಾಣಿ ಅರ್ಶಿತ್, ಅಖಿಲಾ ಚಂದ್ರನ್ ಅವರ ಮಗನಾಗಿದ್ದನು. ಮಗುವಿನ ತಂದೆ ಅಖಿಲ್ ಎರಡು ವರ್ಷಗಳ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಅಖಿಲಾ ಚಂದ್ರನ್ ಆರೋಪಿ ಆಶ್ಕರ್ ಜೊತೆ ಸಂಬಂಧದಲ್ಲಿದ್ದಳು. ಅಶ್ಕರ್ ತನ್ನ ಮಗುವನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದದ್ದು ಅಖಿಲಾಗೆ ತಿಳಿದಿತ್ತು ಎನ್ನಲಾಗಿದೆ. ಅಖಿಲಾಳೊಂದಿಗೆ ನೆಮ್ಮದಿಯ ಜೀವನ ನಡೆಸಲು ಮಗುವನ್ನು ಜಿಗುಪ್ಸೆಯಿಂದ ಕೊಲೆ ಮಾಡಲು ಅಶ್ಕರ್ ಸಂಚು ರೂಪಿಸಿದ್ದನು.
ಆಶ್ಕರ್ ಮೊದಲ ಪತ್ನಿ ಅಮೀನಾ ಮತ್ತು ಆಕೆಯ ಕುಟುಂಬದವರು ನೆಡುಮಂಗಡ್ ಪೊಲೀಸರಿಗೆ ನೀಡಿದ್ದ ಆರು ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಅರ್ಷಿತ್ ಕೊಲೆಯಾಗುತ್ತಿರಲಿಲ್ಲ” ಎಂದು ಸಚಿವೆ ಬಿಂದು ಕೃಷ್ಣ ಬೇಸರ ವ್ಯಕ್ತಪಡಿಸಿದರು. ಮೊದಲು ಪಲೋಡ್ ಠಾಣೆಗೆ ಹೋದಾಗ ಅದು ನೆಡುಮಂಗಡ್ ವ್ಯಾಪ್ತಿಗೆ ಬರುತ್ತದೆ ಎಂದು ಪೊಲೀಸರು ಸಾಗಹಾಕಿದ್ದರು, ತದನಂತರ ನೀಡಿದ ಆರು ದೂರುಗಳ ಮೇಲೂ ಪೊಲೀಸರು ಕ್ರಮ ಕೈಗೊಳ್ಳದಿರುವುದು ನಂಬಲಾಗದ ಸಂಗತಿ ಎಂದರು.

ಅರ್ಶಿತ್ ಸಾವಿನ ಬೆನ್ನಲ್ಲೇ ಅಮೀನಾ ಅವರ ಕುಟುಂಬಸ್ಥರು ಅಶ್ಕರ್ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಮೀನಾಳ ತಂದೆ ಮಾತನಾಡಿ, “ನನ್ನ ಮಗನಿಗೆ ಚೆನ್ನಾಗಿ ಈಜಲು ಬರುತ್ತಿದ್ದರೂ ಆತ ನೀರಿನಲ್ಲಿ ಮುಳುಗಿ ನಿಗೂಢವಾಗಿ ಸಾವನ್ನಪ್ಪಿದ್ದನು. ಅದರ ಹಿಂದೆ ಅಶ್ಕರ್ ಕೈವಾಡವಿರುವ ಶಂಕೆಯಿದೆ. ನಮ್ಮ 10 ಸೆಂಟ್ಸ್ ಆಸ್ತಿ ಮತ್ತು ಮನೆಯನ್ನು ತನ್ನ ಹೆಸರಿಗೆ ಬರೆಯದಿದ್ದಕ್ಕೆ ಅಶ್ಕರ್ ನಮ್ಮ ಮೇಲೆ ವಾಹನ ಹರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು” ಎಂದಿದ್ದಾರೆ. ಅಮೀನಾಳ ತಾಯಿ ಶಜೀಲಾ ಬೀವಿ ಮಾತನಾಡಿ, 2022 ರಲ್ಲಿ ಮದುವೆಯಾದಾಗಿನಿಂದ ಅಶ್ಕರ್, ಆತನ ತಾಯಿ ಮತ್ತು ಸಹೋದರಿ ಸೇರಿ ಅಮೀನಾಳಿಗೆ ತೀವ್ರ ಚಿತ್ರಹಿಂಸೆ ನೀಡಿದ್ದಾರೆ. ಮಾದಕ ದ್ರವ್ಯ ನೀಡಿ ನೇಣು ಹಾಕಲು ಯತ್ನಿಸಿದ್ದು, ಚಲಿಸುವ ಆಟೋರಿಕ್ಷಾದಿಂದ ಹೊರಗೆ ತಳ್ಳಿದ್ದು ಹಾಗೂ ವಿಷ ಕೊಡಲು ಪ್ರಯತ್ನಿಸಿದ ಕರಾಳ ಇತಿಹಾಸ ಅಶ್ಕರ್ನದ್ದಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಪ್ರಸ್ತುತ ಕೇಸ್ ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ.
ಹಸುಗೂಸು ಆರ್ಶಿತ್ ಸಾವನ್ನು ಆರೋಪಿಗಳು ಆರಂಭದಲ್ಲಿ ಮಗು ಸೈಕಲ್ನಿಂದ ಬಿದ್ದು ಸಾವನ್ನಪ್ಪಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯು ಮಗುವಿನ ಮೇಲ ನಡೆದಿದ್ದ ರಾಕ್ಷಸೀಯ ದೌರ್ಜನ್ಯವನ್ನು ಬಿಚ್ಚಿಟ್ಟಿದೆ. ಮಗುವಿನ ಪುಟ್ಟ ದೇಹದ ಮೇಲೆ ಬರೋಬ್ಬರಿ 51 ಗಾಯಗಳಾಗಿದ್ದವು! ಪಾದಗಳ ಮೇಲೆ ಸಿಗರೇಟ್ ಮತ್ತು ಬೆಂಕಿಯ ಜ್ವಾಲೆಗಳಿಂದ ಸುಟ್ಟ ಗಾಯಗಳು, ಬ್ಲೇಡ್ನಿಂದ ಇರಿದ ಗುರುತುಗಳು, ಎದೆಯ ಮೇಲೆ ಮೂಗೇಟುಗಳು ಹಾಗೂ ಗುಪ್ತಾಂಗಗಳ ಮೇಲೂ ಗಾಯಗಳಾಗಿದ್ದವು. ಅಷ್ಟೇ ಅಲ್ಲದೆ, ಮಗುವಿನ ಎರಡೂ ತೋಳುಗಳನ್ನು ಮುರಿಯಲಾಗಿತ್ತು. ಪೊಲೀಸರ ವಿಚಾರಣೆಯಲ್ಲಿ ಅಶ್ಕರ್, ಮಗುವಿನ ತಲೆಯನ್ನು ಗೋಡೆಗೆ ಜೋರಾಗಿ ಢಿಕ್ಕಿ ಹೊಡೆಸಿದ್ದಾಗಿ ಒಪ್ಪಿಕೊಂಡಿದ್ದು, ತಲೆಯೊಳಗಿನ ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.