Connect with us

    DAKSHINA KANNADA

    ಮಂಗಳೂರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಐವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು..!

    ಮಂಗಳೂರು, ಜನವರಿ 21 : ಗಸ್ತು ನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಐವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

    ಮಂಗಳೂರು ಗ್ರಾಮಾಂತರ ಠಾಣೆಯ ಮಲ್ಲಿಕಾರ್ಜುನ ಅಂಗಡಿ ಎಂಬವರು ಪೊಲೀಸ್ ಕಾನ್‌ಸ್ಟೇಬಲ್ ಪ್ರದೀಪ್ ನಾಗನ ಗೌಡರೊಂದಿಗೆ ಜ.20ರ ಮುಂಜಾವ 2ಕ್ಕೆ ಅರ್ಕುಳ ಜಂಕ್ಷನ್‌ನಿಂದ ತುಪ್ಪೆಕಲ್ಲು ಕಡೆಗೆ ಸಂಚರಿಸಿಕೊಂಡು ಹೋಗುತ್ತಿದ್ದಾಗ ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾಂಕ್ರಿಟ್ ರಸ್ತೆಯ ಬಳಿಯ ಖಾಲಿ ಸ್ಥಳದಲ್ಲಿ ಮಾರುತಿ ಸುಝುಕಿ ಬಿಳಿ ಬಣ್ಣದ ಆಲ್ಟೋ ಕಾರೊಂದರ ಬಳಿ ಇಬ್ಬರು ಮತ್ತು ಕಾರಿನೊಳಗೆ ಮೂವರಿದ್ದರು ಎನ್ನಲಾಗಿದೆ.

    ಗಸ್ತು ಕರ್ತವ್ಯದಲ್ಲಿದ್ದ ಮಲ್ಲಿಕಾರ್ಜುನ ಅಂಗಡಿಯವರು ‘ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿ ಅವರ ಕಡೆಗೆ ಟಾರ್ಚ್ ಬೆಳಕನ್ನು ಹಾಯಿಸಿದಾಗ ಕಾರಿನ ಹೊರಗಡೆ ನಿಂತಿದ್ದ ಇಬ್ಬರು ಪೊಲೀಸರತ್ತ ಕಲ್ಲುಗಳನ್ನು ಎತ್ತಿ ಎಸೆದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಆ ಕಲ್ಲುಗಳು ಇಬ್ಬರು ಪೊಲೀಸರ ಕೈಗೆ ತಾಗಿ  ಗಾಯಗಳಾಗಿವೆ. ಕಾರಿನ ಹೊರಗಡೆ ಇದ್ದ ಇಬ್ಬರು ಕಾರಿಗೆ ಹತ್ತಿದೊಡನೆ ಅದರ ಚಾಲಕ ಕಾರನ್ನು ಸ್ಟಾರ್ಟ್ ಮಾಡಿ ಕೊಲೆ ಮಾಡುವ ಉದ್ಧೇಶದಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಹಾಯಿಸಲು ಬಂದಿದ್ದು, ಇಬ್ಬರೂ ರಸ್ತೆಯ ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಕಲ್ಲು ಎಸೆದು, ಕಾರು ಹಾಯಿಸಿ, ಕೊಲೆಗೆ ಯತ್ನಿಸಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply