ಬೆಂಗಳೂರು ಎಪ್ರಿಲ್ 27: ಮಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ನನ್ನು ದೋಷಿ ಎಂದು ಘೋಷಿಸಿರುವ ಬೆಂಗಳೂರಿನ ಎನ್ಐಎ (NIA) ವಿಶೇಷ ನ್ಯಾಯಾಲಯವು ಸೋಮವಾರ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾವೊಂದರಲ್ಲಿ ಕುಕ್ಕರ್ ಬಾಂಬ್ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಸಂಭವಿಸಿದ ಈ ಸ್ಫೋಟದಲ್ಲಿ ಆತ ಮತ್ತು ಆಟೋ ಚಾಲಕ ಇಬ್ಬರೂ ಗಾಯಗೊಂಡಿದ್ದರು. ಈ ಬಾಂಬ್ ಯಾವುದೋ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎನ್ಐಎ ಕೋರ್ಟ್, ಐಪಿಸಿ ಸೆಕ್ಷನ್ 121ಎ (ದೇಶದ ವಿರುದ್ಧ ಯುದ್ಧ ಸಾರುವ ಸಂಚು), ಸೆಕ್ಷನ್ 326 ಹಾಗೂ ಯುಎಪಿಎ (UAPA) ಕಾಯ್ದೆಯಡಿ ಶಿಕ್ಷೆ ಪ್ರಕಟಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಶಾರಿಕ್ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ಮತ್ತು ತಾನು ಮಾಡಿದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದನ್ನು ನ್ಯಾಯಾಧೀಶರು ಗಮನಿಸಿ ಈ ತೀರ್ಪು ನೀಡಿದ್ದಾರೆ.