ಮಂಗಳೂರು ಸೆಪ್ಟೆಂಬರ್ 6 : ಹಿಂದೂಪರ ಕಾರ್ಯಕರ್ತರ ಹತ್ಯೆ ಖಂಡಿಸುವುದರೊಂದಿಗೆ,ಎಸ್ ಡಿಪಿಐ, ಪಿಎಫ್ ಐ, ಕೆಎಫ್ ಡಿ ಸಂಘಟನೆಗಳ ಬ್ಯಾನ್ ಗಾಗಿ ಹಾಗೂ ಸಚಿವ ರಮಾನಾಥ ರೈ ಅವರು ರಾಜೀನಾಮೆ ನೀಡಲು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಾಳೆ ಮಂಗಳೂರು ಚಲೋ ಪ್ರತಿಭಟನಾ ಜಾಥಾ ನಡೆಯಲಿದೆ.
ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆಯುವ ಮಂಗಳೂರು ಚಲೋ ಪ್ರತಿಭಟನಾ ಜಾಥಾ ಯಶಸ್ವಿಯಾಗದಂತೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ತಯಾರಿ ನಡೆಸಿಕೊಂಡಿದೆ. ಆದರೆ, ಹಲವು ಸವಾಲುಗಳಿದ್ದರೂ ಜಾಥಾವನ್ನು ಮಾತ್ರ ನಡೆಸಿಯೇ ತೀರುತ್ತೇವೆಂದು ವಿಶ್ವಾಸದಿಂದ ಹೇಳಿಕೊಂಡಿರುವ ಬಿಜೆಪಿ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರು ಮಂಗಳೂರಿನಲ್ಲಿ
ಬೈಕ್ ಜಾಥಾ ಹಾಗು ಪ್ರತಿಭಟನಾ ಸಭೆಗೆ ಬಿಜೆಪಿ ಮಹಿಳಾ ಮೋರ್ಚಾ ಕೂಡಾ ಕೈ ಜೋಡಿಸಿದೆ. ಸಾವಿರಕ್ಕೂ ಮಿಕ್ಕಿ ದ್ವಿಚಕ್ರ ವಾಹನಗಳೊಂದಿಗೆ ಜಾಥಾ ನಡೆಯಲಿದೆ ಎಂದು ಬಿಜೆಪಿ ಘೋಷಿಸಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮತ್ತಿತರರು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.
ಪ್ರತಿಷ್ಠೆಯ ವಿಚಾರವಾದ ಮಂಗಳೂರು ಚಲೋ
ಒಂದೆಡೆ ಪ್ರತಿಭಟನಾ ಜಾಥಾವನ್ನು ನಡೆಸುತ್ತೇವೆ ಎನ್ನುತ್ತಿರುವ ಬಿಜೆಪಿ, ಇನ್ನೊಂದೆಡೆ ಯಾವುದೇ ಕಾರಣಕ್ಕೂ ತಡೆಯುತ್ತೇವೆ ಎನ್ನುತ್ತಿದೆ ರಾಜ್ಯ ಸರಕಾರ. ಆರೋಪ ಪ್ರತ್ಯಾರೋಪಕ್ಕೆ ಸೀಮಿತವಾಗಿದ್ದ ಈ ಪ್ರತಿಭಟನಾ ಜಾಥಾ ಹಾಗೂ ಪ್ರತಿಭಟನಾ ಸಮಾವೇಶ ಇದೀಗ ಎರಡೂ ಪಕ್ಷಗಳ ಪ್ರತಿಷ್ಠೆಯ ಕಣವಾಗಿದೆ. ಬೈಕ್ ಜಾಥಾ ಹಾಗು ಪ್ರತಿಭಟನಾ ಸಭೆ ಮಾಡಿಯೇ ಸಿದ್ದ ಎಂದು ಬಿಜೆಪಿ ಪಣತೊಟ್ಟಿದೆ. ಬೈಕ್ ರಾಲಿ ಕಾರ್ಯಕ್ರಮಕ್ಕೆ ರಾಜ್ಯದ ಹಲವಡೆಯಿಂದ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.
ಪೊಲೀಸ್ ಸರ್ಪಗಾವಲು
ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಮಂಗಳೂರು ಪೊಲೀಸರು ಸರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಭದ್ರತೆಯ ದೃಷ್ಠಿಯಿಂದ ಇತರ ಜಿಲ್ಲೆಗಳಿಂದ 6 ಎಸ್ಪಿ, ಆರ್ ಎಎಫ್, ಕೆಎಸ್ ಅರ್ ಪಿ, ಸಿಎಆರ್ ಪ್ಲಾಟೂನ್ ಗಳನ್ನು ಮಂಗಳೂರಿಗೆ ಕರೆಯಿಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶದ ಗಡಿಭಾಗ ಸೇರಿದಂತೆ ಮಂಗಳೂರು ನಗರ ಪ್ರವೇಶಿಸುವ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿದೆ. ಮಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರವಲ್ಲದೇ ಪ್ರತಿಯೊಂದು ಪ್ರದೇಶಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದಾರೆ. ನಾಳೆ ನಡೆಯುವ ಜಾಥಾವನ್ನು ತಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆಯನ್ನೂ ನಡೆಸಲಾಗಿದೆ.





