ಪಣಂಬೂರು ಜುಲೈ 01: ಮಂಗಳೂರು ಕರಾವಳಿಯ ಬೈಕಂಪಾಡಿ ಬಳಿ ಸೋಮವಾರ ನಸುಕಿನ ಜಾವ ನಡೆದಿದ್ದ ಚಿನ್ನಾಭರಣ ವ್ಯಾಪಾರಿಯ ಮೇಲಿನ ಸಿನಿಮೀಯ ಶೈಲಿಯ ದರೋಡೆ ಪ್ರಕರಣದ ತನಿಖೆ ಈಗ ಹೊಸ ತಿರುವು ಪಡೆದಿದೆ. ದರೋಡೆಕೋರರು ವ್ಯಾಪಾರಿಯಿಂದ ಅಪಹರಿಸಿಕೊಂಡು ಹೋಗಿದ್ದ ಐಷಾರಾಮಿ ಕಾರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವಿನಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು (CP) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಪತ್ತೆಹಚ್ಚಿದ ಕಾರನ್ನು ಪರಿಶೀಲಿಸಿದಾಗ ದರೋಡೆಕೋರರ ಕ್ರೂರ ಕೃತ್ಯ ಬಯಲಾಗಿದೆ. ವ್ಯಾಪಾರಿ ಕಾರಿನ ಗುಪ್ತ ಜಾಗದಲ್ಲಿ ಎಲ್ಲಾದರೂ ಚಿನ್ನ ಅಡಗಿಸಿಟ್ಟಿರಬಹುದು ಎಂಬ ಶಂಕೆಯಿಂದ ದರೋಡೆಕೋರರು ಕಾರಿನ ಇಡೀ ಸೀಟ್ ಕವರ್ಗಳನ್ನು ಹರಿದು ಹಾಕಿ, ಸಂಪೂರ್ಣವಾಗಿ ಶೋಧ ನಡೆಸಿ ಧ್ವಂಸಗೊಳಿಸಿದ್ದಾರೆ. ಆದರೆ, ವ್ಯಾಪಾರಿಯಿಂದ ಕಸಿದುಕೊಳ್ಳಲಾಗಿದ್ದ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ. ಕೃತ್ಯದ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಆರೋಪಿಗಳು ಅದನ್ನು ಎಲ್ಲಾದರೂ ಎಸೆದಿರುವ ಅಥವಾ ನಾಶಪಡಿಸಿರುವ ಸಾಧ್ಯತೆಯಿದೆ. ಸದ್ಯ ಪೊಲೀಸರು ಮೊಬೈಲ್ ಟವರ್ ಡಂಪ್ (Tower Dump) ತಂತ್ರಜ್ಞಾನದ ಮೂಲಕ ಆರೋಪಿಗಳ ಜಾಡು ಹಿಡಿಯುತ್ತಿದ್ದಾರೆ.

ಮುಂಜಾನೆ 2:30 ರ ಸುಮಾರಿಗೆ ಬರೋಬ್ಬರಿ 3 ಕಾರುಗಳಲ್ಲಿ ಬಂದಿದ್ದ ಮುಖವಾಡಧಾರಿ ದರೋಡೆಕೋರರು ವ್ಯಾಪಾರಿಯನ್ನು ಅಡ್ಡಗಟ್ಟಿ 180 ಗ್ರಾಂ ಚಿನ್ನಾಭರಣ, ನಗದು ಸಮೇತ ಕಾರನ್ನು ದೋಚಿದ್ದರು. ಪ್ರಸ್ತುತ ಕಾರು ಬೆಂಜನಪದವಿನಲ್ಲಿ ಸಿಕ್ಕಿರುವುದರಿಂದ ಆರೋಪಿಗಳು ಇದೇ ಮಾರ್ಗವಾಗಿ ಹೆದ್ದಾರಿ ಮುಖಾಂತರ ಬೆಂಗಳೂರು, ಕೊಡಗು, ಧರ್ಮಸ್ಥಳ ಅಥವಾ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೇರಳಕ್ಕೆ ಪರಾರಿಯಾಗಿರುವ ದಟ್ಟ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಆಯಾ ಭಾಗದ ಟೋಲ್ ಗೇಟ್ಗಳು ಮತ್ತು ಪ್ರಮುಖ ಜಂಕ್ಷನ್ಗಳ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಕಲೆಹಾಕುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಮಂಗಳೂರು ನಗರ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಜಾಲ ಬೀಸಿದ್ದಾರೆ.