ಮಂಗಳೂರು ಎಪ್ರಿಲ್ 1: ಪಲ್ಗುಣಿ ನದಿಗೆ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ದೋಣಿ ಮಗುಚಿ ನೀರುಪಾಲದ ಘಟನೆ ದ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ಬೈಲ್ ಎಂಬಲ್ಲಿ ಸಂಭವಿಸಿದೆ.
ಕುಂಜತ್ಬೈಲ್ ನಿವಾಸಿಗಳಾದ ಗಣೇಶ್ (28) ಮತ್ತು ರಾಯಲ್ (24) ಮೃತಪಟ್ಟ ದುರ್ದೈವಿಗಳು. ಇವರೊಂದಿಗೆ ತೆರಳಿದ್ದ ನಿತೇಶ್ (29) ಎಂಬವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ನಸುಕಿನ ಜಾವ ಸುಮಾರು 1:30ರ ವೇಳೆಗೆ ಮೂವರು ಯುವಕರು ಸಣ್ಣ ತೆಪ್ಪದಲ್ಲಿ ಮೀನು ಹಿಡಿಯಲು ನದಿಗೆ ಇಳಿದಿದ್ದರು. ನದಿ ಮಧ್ಯೆ ತಲುಪಿದಾಗ ದೋಣಿ ಏಕಾಏಕಿ ಮಗುಚಿದೆ. ಈಜಲು ಬಾರದ ಗಣೇಶ್ ಮತ್ತು ರಾಯಲ್ ನೀರಿನಲ್ಲಿ ಮುಳುಗಿದ್ದಾರೆ. ಮಧ್ಯಾಹ್ನದ ವೇಳೆಗೆ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಮುಳುಗು ತಜ್ಞರು ನಡೆಸಿದ ಕಾರ್ಯಾಚರಣೆಯಲ್ಲಿ ಗಣೇಶ್ ಅವರ ಮೃತದೇಹ ಪತ್ತೆಯಾಗಿದೆ. ರಾಯಲ್ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.