ಮಂಗಳೂರು ಮಾರ್ಚ್ 30 : ಮಂಗಳೂರಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಜ್ ಭವನವನ್ನು ಕೂಡಲೇ ನಿರ್ಮಿಸಬೇಕು ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಕಲ್ಪಿಸಬೇಕು ಎಂದು ಎಸ್ಡಿಪಿಐ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಒತ್ತಾಯಿಸಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಪ್ರತಿ ವರ್ಷ ಸುಮಾರು 1,300 ಯಾತ್ರಿಕರು ಹಜ್ಗೆ ತೆರಳುತ್ತಾರೆ. ಮಂಗಳೂರಿನಲ್ಲಿ ಭವನ ಮತ್ತು ನೇರ ವಿಮಾನ ವ್ಯವಸ್ಥೆ ಇಲ್ಲದ ಕಾರಣ ಯಾತ್ರಿಕರು ಬೆಂಗಳೂರಿಗೆ ಹೋಗಿ ಅಲ್ಲಿ ನಾಲ್ಕು ದಿನ ತಂಗಬೇಕಾದ ಅನಿವಾರ್ಯತೆ ಇದೆ. ಇದು ಹಿರಿಯ ನಾಗರಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಲಕ್ಷ್ಯದ ಆರೋಪ: “ಹಜ್ ಭವನ ನಿರ್ಮಾಣಕ್ಕೆ ಬಜೆಟ್ನಲ್ಲಿ ₹10 ಕೋಟಿ ಅನುದಾನ ಘೋಷಣೆಯಾಗಿ ವರ್ಷಗಳೇ ಕಳೆದಿವೆ. ಮುಡಿಪು ಮತ್ತು ಬಜ್ಜೆಯ ಕೆಂಜಾರ್ ಬಳಿ 3.5 ಎಕರೆ ಜಾಗ ಲಭ್ಯವಿದೆ. ದಾನಿಗಳೂ ಜಾಗ ನೀಡಿದ್ದಾರೆ. ಹೀಗಿದ್ದರೂ ಕಳೆದ ಒಂದೂವರೆ ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಸದ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಡೆ ಸಂಶಯಾಸ್ಪದವಾಗಿದೆ,” ಎಂದು ಅವರು ಟೀಕಿಸಿದರು. ಕೊರೊನಾ ನಂತರ ಸ್ಥಗಿತಗೊಂಡಿರುವ ನೇರ ವಿಮಾನಯಾನವನ್ನು ಪುನರಾರಂಭಿಸಿದರೆ ಉಡುಪಿ ಮತ್ತು ಕಾಸರಗೋಡು ಭಾಗದ ಸಾವಿರಾರು ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು ಅವರು ಆಗ್ರಹಿಸಿದರು.