ಮಂಗಳೂರು ಸೆಪ್ಟೆಂಬರ್ 12: ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆ ಪತ್ರಗಳನ್ನು ತಯಾರಿಸುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಪತ್ತೆ ಹಚ್ಚಿ ಐವರನ್ನು ಅರೆಸ್ಟ್ ಮಾಡಿದ್ದಾರೆ.


ಸಿಸಿಬಿ ಪೊಲೀಸರಿಗೆ ಕೆಲವು ವ್ಯಕ್ತಿಗಳು ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಪಹಣಿ ಪತ್ರಗಳನ್ನು ಸಿದ್ಧಪಡಿಸಿ, ಅವುಗಳನ್ನು ನೈಜ ದಾಖಲೆಗಳೆಂದು ತೋರಿಸಿ ವಿವಿಧ ಇಲಾಖೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಳಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ದಾಖಲೆಗಳನ್ನು ಬಳಸಿಕೊಂಡು ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಜಾಮೀನು ಪಡೆಯಲಾಗುತ್ತಿತ್ತು ಎಂಬ ಮಾಹಿತಿ ಆಧಾರದಲ್ಲಿ ಪೊಲೀಸರು ಬಲವಾದ ಕಾರ್ಯಾಚರಣೆಗೆ ಮುಂದಾದರು.

ಮೊದಲ ಹಂತದಲ್ಲಿ, ಉರ್ವ ಠಾಣೆ ವ್ಯಾಪ್ತಿಯ ಅಬ್ದುಲ್ ರೆಹಮಾನ್ (46), ಬಪ್ಪನಾಡು ಗ್ರಾಮ, ಮುಲ್ಕಿ ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆತನು ನಕಲಿ ದಾಖಲೆಗಳನ್ನು ತಯಾರಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ವಿಚಾರ ಬಹಿರಂಗವಾಯಿತು. ಆತನ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಬ್ದುಲ್ ರೆಹಮಾನ್ ನೀಡಿದ ಮಾಹಿತಿಯ ಆಧಾರದ ಮೇಲೆ, ನಕಲಿ ದಾಖಲೆ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ನಿಶಾಂತ್ ಕುಮಾರ್ (28), ತೊಕ್ಕೊಟ್ಟು, ಮಂಗಳೂರು ಎಂಬಾತನನ್ನು ಬಂಧಿಸಲಾಯಿತು. ನಿಶಾಂತ್ ಕುಮಾರ್, ಕೊಡಿಯಾಲ್ ಬೈಲ್ ಪ್ರದೇಶದ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದನೆಂಬುದು ತನಿಖೆಯಿಂದ ತಿಳಿದುಬಂದಿದೆ.


ಅಲ್ಲದೆ ನಿತಿನ್ ಕುಮಾರ್ (31), ಬಂಟ್ವಾಳ – ಗಣೇಶ್ ಕೆ. ಸಾಲ್ಯಾನ್ ಎಂಬ ನಕಲಿ ಹೆಸರಿನಲ್ಲಿ ಜಾಮೀನು ನೀಡಿ ನ್ಯಾಯಾಲಯಕ್ಕೆ ವಂಚನೆ ಮಾಡಿದ್ದಾನೆ. ಹಸನ್ ರಿಯಾಜ್ (46), ಬಂಟ್ವಾಳ – ಎ.ಎಂ. ಹಮೀದ್ ಎಂಬ ಹೆಸರಿನಲ್ಲಿ ಆರೋಪಿಗೆ ಜಾಮೀನು ಪಡೆದು ನ್ಯಾಯಾಂಗವನ್ನು ತಪ್ಪುದಾರಿಗೆಳೆದುಕೊಂಡಿದ್ದಾನೆ. ಮಹಮ್ಮದ್ ಹನೀಫ್ (39), ಕಾವೂರು, ಮಂಗಳೂರು – ನಕಲಿ ದಾಖಲೆಗಳನ್ನು ಒದಗಿಸಿ ಆರೋಪಿಗಳಿಗೆ ಜಾಮೀನು ಕೊಡಿಸುವಲ್ಲಿ ಸಹಕರಿಸಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯಿಂದ, ಈ ವಂಚನೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡುವ ಮೂಲಕ ಆರೋಪಿಗಳಿಗೆ ಅಕ್ರಮವಾಗಿ ಜಾಮೀನು ನೀಡುವ ವ್ಯವಸ್ಥಿತ ಜಾಲವೇ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಗಳು ಸ್ಪಷ್ಟವಾಗಿವೆ.

Share Information