ಮಂಗಳೂರು ಜನವರಿ 27: ಸ್ನೇಹಿತನ ಜೊತೆ ಮಂಗಳೂರಿಗೆ ಕೆಲಸ ಹುಡುಕಿಕೊಂಡ ಬಂದ ಯುವಕನೊಬ್ಬ ಕೆಲಸ ಸಿಗದ ಕಾರಣಕ್ಕೆ ಬೇಸತ್ತು ಮರವೊಂದನ್ನು ಏರಿ ಕುಳಿತು ಕೆಲ ಕಾಲ ಆತಂಕ ಸೃಷ್ಠಿಸಿದ ಘಟನೆ ಕರಂಗಲಪಾಡಿಯಲ್ಲಿ ಸೋಮವಾರ ನಡೆದಿದೆ.

ಬಾಗಲಕೋಟೆ ಹುನಗುಂದ ನಿವಾಸಿ ಭೀಮಪ್ಪ ತಳವಾರ್ (24) ಮರವೇರಿದ ವ್ಯಕ್ತಿ. ಈತನ ಊರಿನವರು ಮಂಗಳೂರಿನಲ್ಲಿ ಕೆಲಸಕ್ಕಿದ್ದು, ಅವರ ಜತೆ ಕೆಲಸ ಸಿಗಬಹುದು ಎಂಬ ಕಾರಣಕ್ಕೆ ಮಂಗಳೂರಿಗೆ ಆಗಮಿಸಿದ್ದ. ಇಲ್ಲಿಗೆ ಬಂದು ತಮ್ಮ ಪರಿಚಿತರನ್ನು ಸಂಪರ್ಕಿಸಿದಾಗ ಅವರು ಅದಾಗಲೇ ಮರಳಿ ಊರಿಗೆ ತೆರಳಿ ಆಗಿತ್ತು. ಇದರಿಂದ ಬೇಸತ್ತು ಕೆಲಸವೂ ಇಲ್ಲದೆ ಮರ ಹತ್ತಿ ತುದಿಯಲ್ಲಿ ಕುಳಿತಿದ್ದ.

ಸ್ಥಳೀಯರು ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಕದ್ರಿ ಪೊಲೀಸರು ಆಗಮಿಸಿ ಯುವಕನ ಮನವೊಲಿಸಿ ಕೆಳಗಿಳಿಸಿ ಬಾಗಲಕೋಟೆಗೆ ಕಳುಹಿಸಿಕೊಟ್ಟರು. ಮರದಿಂದ ಇಳಿದ ಮೇಲೆ ಆತನನ್ನು ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.