ಮಂಗಳೂರು ಮಾರ್ಚ್ 17: ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ವಿಚಾರದಲ್ಲಿ ಉಂಟಾದ ಗಲಾಟೆಯು ಕೊಲೆ ಯತ್ನಕ್ಕೆ ತಿರುಗಿದ್ದು, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾರು ಹರಿಸಲು ಯತ್ನಿಸಿದ ಆರೋಪಿಯನ್ನು ಕದ್ರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಗರದ ಮಲ್ಲಿಕಟ್ಟೆ ನಿವಾಸಿ ಮೋಹನ್ದಾಸ್ ಶೆಟ್ಟಿ (56) ಕೊಲೆ ಯತ್ನಕ್ಕೊಳಗಾದವರು. ಆರೋಪಿ ಶರೀಫ್ ಎಂಬಾತ ಸುರತ್ಕಲ್ನ ಕಾನ ಮತ್ತು ವಾವಂಜೂರಿನಲ್ಲಿ ಭೂ ವ್ಯವಹಾರಕ್ಕಾಗಿ ಸುಮಾರು ₹2 ಕೋಟಿ ಹೂಡಿಕೆ ಮಾಡಿದ್ದ ಎನ್ನಲಾಗಿದೆ. ಈ ವ್ಯವಹಾರದಲ್ಲಿ ಮೋಹನ್ದಾಸ್ ಶೆಟ್ಟಿ ತನಗೆ ಮೋಸ ಮಾಡಿದ್ದಾರೆ ಎಂಬ ಸಿಟ್ಟಿನಿಂದ ಶರೀಫ್ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಆರ್ಯ ಸಮಾಜ ರಸ್ತೆಯಲ್ಲಿ ಅವರೊಂದಿಗೆ ಮಾತುಕತೆಗೆ ಇಳಿದಿದ್ದ.
ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿದ್ದು, ಶರೀಫ್ ಬಲವಂತವಾಗಿ ಮೋಹನ್ದಾಸ್ ಅವರ ಮೊಬೈಲ್ ಕಸಿದುಕೊಂಡಿದ್ದ ಎನ್ನಲಾಗಿದೆ. ಬಳಿಕ ಮೋಹನ್ದಾಸ್ ಶೆಟ್ಟಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಲ್ಲಿಂದ ತೆರಳುತ್ತಿದ್ದಾಗ, ಆರೋಪಿ ಶರೀಫ್ ತನ್ನ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಬೈಕ್ಗೆ ಬಲವಾಗಿ ಢಿಕ್ಕಿ ಹೊಡೆದಿದ್ದಾನೆ. ಮೋಹನ್ದಾಸ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಕದ್ರಿ ಪೊಲೀಸರು ಆರೋಪಿ ಶರೀಫ್ನನ್ನು ವಶಕ್ಕೆ ಪಡೆದಿದ್ದಾರೆ. “ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ,” ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.