ಮಂಡ್ಯ, ಸೆಪ್ಟೆಂಬರ್ 08: ಮದ್ದೂರಿನ ರಾಮ್​ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿಯಿಂದಲೇ ಕಲ್ಲು ತೂರಾಟ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟ ಮಾಡಲಾಗುತ್ತಿದೆ.

ಮಸೀದಿ ಮುಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ಉಂಟಾಗಿದ್ದು, ಈ ವೇಳೆ ಕೆಲ ಕಿಡಿಗೇಡಿಗಳಿಂದಲೂ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಸದ್ಯ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಭುಗಿಲೆದಿದೆ. ಒಂದ್ಕಡೆ ಪೊಲೀಸರ ಜೊತೆಗೆ ವಾಗ್ವಾದ ನಡೆದಿದ್ದರೆ, ಮತ್ತೊಂದು ಕಡೆ ಯುವಕರ ಗುಂಪು ರಸ್ತೆಯಲ್ಲೇ ಕುಳಿತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಮಸೀದಿ ಮುಂದೆ ಡಿಜೆ ಹಾಕಿ ಗಣಪತಿ ಮೆರವಣಿಗೆ ಮಾಡಿದ್ದಾರೆ.

ಈ‌ ವೇಳೆ ಮಸೀದಿ ಜಾಗ ಬಿಟ್ಟು ಹೋಗುವಂತೆ ಪೊಲೀಸರು ಹೇಳಿದ್ದಾರೆ. ಹೀಗಿದ್ದರೂ ಘೋಷಣೆ ಕೂಗುತ್ತ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಈ‌ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಎಲ್ಲರೂ ಓಡಿ ಹೋಗಿದ್ದಾರೆ.

ಹಲವರಿಗೆ ಗಾಯ: ಇನ್ನು ಪೊಲೀಸರ ಲಾಠಿಚಾರ್ಜ್ ವೇಳೆ ಓಡುವಾಗ ಕೆಳಗೆ ಬಿದ್ದ ಪ್ರತಿಭಟನಾನಿರತ ಹಲವರಿಗೆ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ಮಹಿಳೆಯರಿಗೂ ಗಾಯಗಳಾಗಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಹಲವು ಬೈಕ್​ಗಳು ಕೂಡ ಜಖಂಗೊಂಡಿವೆ.

ಘಟನೆ ಹಿನ್ನಲೆ

ನಿನ್ನೆ ಸಂಜೆ 7.30ರ ಹೊತ್ತಿಗೆ ಮಂಡ್ಯದ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿದ್ದರು. ಬೀದಿ ಬೀದಿಯಲ್ಲಿ ಮೆರವಣಿಗೆ ಮೂಲಕ ಬಂದ ಗಣಪ ಇನ್ನೇನು ಮಸೀದಿ ಮುಂದೆ ಹಾದುಹೋಗಬೇಕಿತ್ತು. ಈ ವೇಳೆ ದಿಢೀರ್ ಲೈಟ್​ ಆಫ್​ ಮಾಡಿ ಮಸೀದಿಯಿಂದ ಕಲ್ಲು ತೂರಾಟ ನಡೆಸಲಾಗಿದೆಯಂತೆ. ಅಲ್ದೇ ದೊಣ್ಣೆಗಳನ್ನ ಕೂಡ ಎಸೆದಿದ್ದಾರೆ ಅಂತಾ ಆರೋಪಿಸಲಾಗಿದೆ. ನಾಲ್ವರು ಹೋಂಗಾರ್ಡ್​ಗಳು ಸೇರಿ 8 ಜನರು ಗಾಯಗೊಂಡಿದ್ದಾರೆ.

Share Information