ಬಂಟ್ವಾಳ, ಮೇ 16 : ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಜೀರ್ಣೋದ್ಧಾರಗೊಂಡಿದ್ದ ದೇವಸ್ಥಾನಕ್ಕೆ ಸಿಡಿಲು ಬಡಿದು ಗರ್ಭಗುಡಿಯ ಪ್ರಾಕಾರ ಸಂಪೂರ್ಣ ಹಾನಿಗೊಂಡ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಶನಿವಾರ ಸಂಜೆ ನಡೆದಿದೆ.

ಸಿಡಿಲು ಬಡಿದ ಈ ಭೀಕರ ಘಟನೆಯಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಶನಿವಾರ ಸಂಜೆ ವೇಳೆ ಗುಡುಗು ಸಿಡಿಲು ಸಹಿತ ಸುರಿದ ಮಳೆ ವೇಳೆ ದೇವಸ್ಥಾನದ ಮೇಲೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ತೀವ್ರತೆ ಎಷ್ಟಿತ್ತೆಂದರೆ, ಗರ್ಭಗುಡಿಯ ಮೇಲ್ಭಾಗದ ಪ್ರಾಕಾರದಲ್ಲಿದ್ದ ದಪ್ಪನೆಯ ಶಿಲಾ ಕಲ್ಲುಗಳು ಕ್ಷಣಾರ್ಧದಲ್ಲಿ ಛಿದ್ರ ಛಿದ್ರಗೊಂಡು ನೆಲಕ್ಕಪ್ಪಳಿಸಿವೆ.

ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಈ ಕ್ಷೇತ್ರವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಜೀರ್ಣೋದ್ಧಾರಗೊಳಿಸಲಾಗಿತ್ತು. ಅತ್ಯಂತ ವೈಭವದಿಂದ ಬ್ರಹ್ಮಕಲಶೋತ್ಸವ ಕಂಡಿದ್ದ ಈ ದೇವಸ್ಥಾನದ ಗರ್ಭಗುಡಿ ಸಂಕೀರ್ಣಕ್ಕೇ ಈಗ ತೀವ್ರ ಹಾನಿಯಾಗಿರುವುದು ಭಕ್ತ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಪ್ರಸ್ತುತ ಗರ್ಭಗುಡಿಯ ಇಡೀ ರಚನೆಯ ಸ್ಥಿರತೆಗೆ ಧಕ್ಕೆಯುಂಟಾಗಿದ್ದು, ಅದನ್ನು ಮತ್ತೆ ಸಂಪೂರ್ಣವಾಗಿ ನವೀಕರಣಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ದುರಂತದ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಗರ್ಭಗುಡಿಯ ಒಳಗೆ ಇರದ ಕಾರಣ ಅರ್ಚಕರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.