LATEST NEWS
ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ಬಡಿದ ಸಿಡಿಲು.. ಒಬ್ಬ ಸಾವು ಮತ್ತೊಬ್ಬ ಕೋಮಾಗೆ…!!
ಮಂಗಳೂರು ಎಪ್ರಿಲ್ 21: ನಿನ್ನೆ ಆಟವಾಡುತ್ತಿದ್ದಾಗ ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಕ್ಕಳಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು , ಮತ್ತೊಬ್ಬ ಗಂಭೀರವಾಗಿದ್ದು, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾನೆ. ನಗರದ ಮುಲ್ಕಿಯ ಇಂದಿರಾನಗರದ ಬೊಳ್ಳೂರು ಎಂಬಲ್ಲಿ ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ನಿನ್ನೆ ಸಿಡಿಲು ಬಡಿದಿದ್ದು, ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾನೆ.
ಈ ಘಟನೆ ಮಂಗಳೂರು ಹಳೆಯಂಗಡಿ ಬಳಿ ನಡೆದಿದೆ. ಮೃತಪಟ್ಟ ಬಾಲಕನನ್ನು ಇಂದಿರಾನಗರ ಬೊಳ್ಳೂರು ನಿವಾಸಿ ಮನ್ಸೂರ್ ಎಂಬವರ ಪುತ್ರ ನಿಹಾನ್ (5) ಎಂದು ಗುರುತಿಸಲಾಗಿದ್ದು, ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತೇಶ್ (6) ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದಿರಾನಗರ ಬೊಳ್ಳೂರಿನ ಮಸೀದಿ ಹಿಂಭಾಗದ ಖಾಸಗಿ ಜಾಗದಲ್ಲಿ ನಿನ್ನೆ ಸಂಜೆ ನಿಹಾನ್ ಹಾಗೂ ಮಾರುತೇಶ್ ಆಟವಾಡುತ್ತಿದ್ದರು. ಈ ಸಂದರ್ಭ ಸಿಡಿಲು ಬಡಿದಿದ್ದು, ಮಕ್ಕಳಿಬ್ಬರೂ ಮೂರ್ಛೆ ತಪ್ಪಿ ಸ್ಥಳದಲ್ಲಿಯೇ ಬಿದ್ದಿದ್ದರು. ತಕ್ಷಣ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೇ ನಿಹಾನ್ ಮೃತಪಟ್ಟಿದ್ದಾನೆ. ಮಾರುತೇಶ್ ಕೋಮಾ ಸ್ಥಿತಿಯಲ್ಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
You must be logged in to post a comment Login