ಕೊಚ್ಚಿ ಮೇ 01: ಕೇರಳದ ಅಂಗಮಾಲಿ ಮತ್ತು ಇರಿಂಜಲಕುಡ ದೇವಾಲಯಗಳಲ್ಲಿ ಶುಕ್ರವಾರ ನಡೆದ ಆನೆ ದಾಳಿಯ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಆನೆಗಳು ಕೆರಳುತ್ತಿದ್ದು, ಹಬ್ಬದ ಮೆರವಣಿಗೆಗಳ ನಡುವೆ ಇಂತಹ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಅಂಗಮಾಲಿಯ ಕಿಡಂಗೂರ್ ಮಹಾವಿಷ್ಣು ದೇವಸ್ಥಾನದ ಬಳಿ ‘ಮಯ್ಯನಾಡ್ ಪಾರ್ಥಸಾರಥಿ’ ಎಂಬ ಆನೆ ಉದ್ರೇಕಗೊಂಡು ನಡೆಸಿದ ದಾಳಿಯಲ್ಲಿ ಆನೆಯನ್ನು ಸಾಗಿಸುತ್ತಿದ್ದ ವಾಹನದ ಚಾಲಕ ವಿಷ್ಣು (40) ಎಂಬವರು ಸಾವನ್ನಪ್ಪಿದ್ದಾರೆ. ಆನೆ ನಿಯಂತ್ರಿಸಲು ಹೋದ ಮಾವುತ ಪ್ರದೀಪ್ ಎಂಬವರಿಗೂ ಗಾಯಗಳಾಗಿವೆ. ಆನೆಯು ದೇವಸ್ಥಾನದ ಆವರಣದಲ್ಲಿದ್ದ ಕಾರು ಮತ್ತು ಸ್ಕೂಟರ್ಗಳನ್ನು ಜಖಂಗೊಳಿಸಿದ್ದು, ಮನೆಯ ಗೋಡೆಗೂ ಡಿಕ್ಕಿ ಹೊಡೆದಿದೆ. ಸುಮಾರು ಎರಡು ಗಂಟೆಗಳ ಪ್ರಯತ್ನದ ನಂತರ ಆನೆಯನ್ನು ನಿಯಂತ್ರಣಕ್ಕೆ ತರಲಾಯಿತು.
ಇರಿಂಜಲಕುಡದ ಕೂಡಲ್ಮಾಣಿಕ್ಯಂ ದೇವಸ್ಥಾನದ ಹಬ್ಬದ ವೇಳೆ ‘ವಾಳ್ವಾಡಿ ಕಾಶಿನಾಥನ್’ ಎಂಬ ಆನೆ ದಾಳಿ ಮಾಡಿದ್ದರಿಂದ ಶ್ರೀಕುಟ್ಟನ್ (25) ಎಂಬ ಮಾವುತ ಸಾವನ್ನಪ್ಪಿದ್ದಾರೆ. ಎದೆಗೆ ತೀವ್ರ ಗಾಯಗಳಾಗಿದ್ದ ಶ್ರೀಕುಟ್ಟನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಮತ್ತೊಬ್ಬ ಮಾವುತ ಅಮಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.