ಸುಬ್ರಹ್ಮಣ್ಯ ಎಪ್ರಿಲ್ 09: ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಅರಂಪಾಡಿ ಎಂಬಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದಿರುವ ಘಟನೆ ಏಪ್ರಿಲ್ 8ರ ತಡರಾತ್ರಿ ಸಂಭವಿಸಿದೆ. ಗ್ರಾಮದ ಅರಂಪಾಡಿ ಈಶ್ವರ ಗೌಡ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇದೇ ಭಾಗದ ಕಿಶೋರ್ ಅರಂಪಾಡಿ ಎಂಬುವರ ಮನೆಯ ನಾಯಿಯನ್ನೂ ಚಿರತೆ ಕೊಂದಿತ್ತು. ಕಾಡು ಪ್ರದೇಶದಿಂದ ಆವೃತವಾಗಿರುವ ಅರಂಪಾಡಿ ವ್ಯಾಪ್ತಿಯಲ್ಲಿ ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.
ಚಿರತೆ ಹಾವಳಿಯಿಂದ ಮುಕ್ತಿ ನೀಡಲು ಅರಣ್ಯ ಇಲಾಖೆ ತಕ್ಷಣವೇ ಕಾರ್ಯಾಚರಣೆ ನಡೆಸಿ ಬೋನಿಟ್ಟು ಚಿರತೆಯನ್ನು ಹಿಡಿಯಬೇಕು ಹಾಗೂ ರಸ್ತೆ ಬದಿಗಳಲ್ಲಿ ಪಂಚಾಯತ್ ವತಿಯಿಂದ ಸೋಲಾರ್ ದೀಪ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ಅರಣ್ಯ ಸಚಿವರಿಗೂ ಮನವಿ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.