ಲಕ್ನೋ,ಫೆಬ್ರವರಿ 13: ನಿಯಂತ್ರಣ ತಪ್ಪಿದ ವಿದ್ಯಾರ್ಥಿಯ ಕಾರೊಂದು ಡಿಕ್ಕಿ ಹೊಡೆದು 6 ವರ್ಷದ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ನೋದಲ್ಲಿ ನಡೆದಿದೆ.
ಮೃತ ಬಾಲಕನನ್ನು ಕೇಂದ್ರೀಯ ವಿದ್ಯಾಲಯದಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾಂತ್ (6) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅರ್ಮಾನ್, ಮೀನಾ ದೇವಿ , ಸಾಧನಾ , ಇ-ರಿಕ್ಷಾ ಚಾಲಕ ಅವಧ್ ಬಿಹಾರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೇರ್ವೆಲ್ ಪಾರ್ಟಿ ಮುಗಿಸಿ ವಾಪಸ್ ಆಗುತ್ತಿದ್ದ ವಿದ್ಯಾರ್ಥಿ ಗೌರವ್ ಸಿಂಗ್ (21) ಚಲಾಯಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಬೆನ್ನಲ್ಲೇ ವಿದ್ಯಾರ್ಥಿ ಗೌರವ್ ಸಿಂಗ್ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವೇಗವಾಗಿ ಬಂದ ಕಾರು ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದು, ಅಪಘಾತದ ಪರಿಣಾಮವಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯ ಕಡೆಗೆ ತಿರುಗಿದೆ. ಬಳಿಕ ಆ ವಾಹನವು ಆ ವಾಹನವು ಹತ್ತಿರದಲ್ಲಿ ನಿಂತಿದ್ದ ಅರ್ಮಾನ್, ಸಾಧನಾ ಪಟೇಲ್, ಆಕೆಯ ತಾಯಿ ಮೀನಾ ದೇವಿ ಮತ್ತು ಸಾಧನಾ ಅವರ ಆರು ವರ್ಷದ ಮಗ ದೀಕ್ಷಾಂತ್ ಮೇಲೆ ಹರಿದಿದೆ.
ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ದೀಕ್ಷಾಂತ್ನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದ್ರೆ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.