ಬೆಂಗಳೂರು, ಮಾ. 3: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಮೂಲಕ ಮನೆಮಾತಾಗಿರುವ ‘ವೆಂಕಿ’ ಖ್ಯಾತಿಯ ನಟ ಚಂದ್ರಶೇಖರ್ ಶಾಸ್ತ್ರಿ ದಂಪತಿ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಈ ದಂಪತಿಗೆ ಸುಯೋಧ್ ಎಂಬ ಮುದ್ದಾದ ಮಗನಿದ್ದು, ಕುಟುಂಬದಲ್ಲಿ ಮತ್ತೆ ಸಂತಸದ ಸಂಭ್ರಮ ಮನೆಮಾಡಿದೆ. ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಟ ಚಂದ್ರಶೇಖರ್ ಅವರ ಪತ್ನಿ ಸೌಮ್ಯ ಅವರಿಗೆ ಗೆಳತಿಯರು ಶಾಸ್ತ್ರೋಕ್ತವಾಗಿ ಶುಭ ಹಾರೈಸಿ ‘ಮಾಮ್ ಟು ಬಿ’ ಕಿರೀಟ ತೊಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪತ್ನಿ ಸೌಮ್ಯ ಜೊತೆಗೆ ಚಂದ್ರಶೇಖರ್ ರೊಮ್ಯಾಂಟಿಕ್ ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದಂಪತಿಯ ಈ ವಿಶೇಷ ಕ್ಷಣಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ಮೂಲತಃ ಶಿವಮೊಗ್ಗ ಜಿಲ್ಲೆ ಜಿಲ್ಲೆಯವರಾದ ಚಂದ್ರಶೇಖರ್ ಶಾಸ್ತ್ರಿ ಪ್ರಸ್ತುತ ಬೆಂಗಳೂರುನಲ್ಲಿ ನೆಲೆಸಿದ್ದಾರೆ. ಬಾಲ್ಯದಿಂದಲೇ ನಾಟಕ ರಂಗದತ್ತ ಆಸಕ್ತಿ ಹೊಂದಿದ್ದ ಅವರು, ಧಾರಾವಾಹಿಗಳ ಜೊತೆಗೆ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದಾರೆ.

Colors Kannada ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ದಾಸ ಪುರಂದರ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಅವರು, ಬಳಿಕ Star Suvarna ವಾಹಿನಿಯ ‘ನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಪ್ರಸ್ತುತ Zee Kannada ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಮಾತು ಬಾರದ, ಕಿವಿ ಕೇಳದ ವಿಶೇಷ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿರುವ ಅವರು, ತಮ್ಮ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಅಪಾರ ಪ್ರೀತಿ ಗಳಿಸಿದ್ದಾರೆ. ಚಂದ್ರಶೇಖರ್–ಸೌಮ್ಯ ದಂಪತಿಯ ಈ ಸಂತಸದ ಸುದ್ದಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.



