ಕುಂದಾಪುರ ಎಪ್ರಿಲ್ 19: ಬೌದ್ಧ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಿ, ನಿರಾಕರಿಸಿದ ಪತ್ನಿಯ ಮೇಲೆ ಹಲ್ಲೆ ನಡೆಸಿ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಟ್ವಾಳದ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಯರಾಮ ಶೆಟ್ಟಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಂಪಾರು ಗ್ರಾಮದ ನಿಶಿತಾ ಶೆಟ್ಟಿ (26) ಅವರು ಜಯರಾಮ ಶೆಟ್ಟಿ ಅವರನ್ನು 2021ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಮತ್ತು ಮಕ್ಕಳು ಬೌದ್ಧ ಧರ್ಮಕ್ಕೆ ಮತಾಂತರವಾಗುವುದು ಅನಿವಾರ್ಯ ಎಂದು ಜಯರಾಮ ಶೆಟ್ಟಿ ಪೀಡಿಸುತ್ತಿದ್ದನು ಎನ್ನಲಾಗಿದೆ. ಇದಕ್ಕೆ ನಿಶಿತಾ ವಿರೋಧ ವ್ಯಕ್ತಪಡಿಸಿದಾಗ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರು ತಿಂಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ್ದ ನಿಶಿತಾ ಅವರು ತವರು ಮನೆ ಬಲಾಡಿಯಲ್ಲಿದ್ದರು. ಏಪ್ರಿಲ್ 18ರಂದು ಮನೆಗೆ ಬಂದಿದ್ದ ಜಯರಾಮ ಶೆಟ್ಟಿ, ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೆಗೆದು ನಿಶಿತಾ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಕೊಲ್ಲುವ ಉದ್ದೇಶದಿಂದ ಚೂಡಿದಾರ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ್ದಾನೆ. ಕುಟುಂಬಸ್ಥರು ಹಲ್ಲೆಯನ್ನು ಬಿಡಿಸಿದಾಗ ಪತ್ನಿ ಮತ್ತು ಮಾವನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಶಂಕರನಾರಾಯಣ ಪೊಲೀಸರು ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.