ಬೆಂಗಳೂರು ಎಪ್ರಿಲ್ 24: ತನ್ನ ಸಹಪಾಟಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮಗುವಿಗೆ ತಂದೆಯಾದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೆ ಆದೇಶದಲ್ಲಿ ಮಗು ಮತ್ತು ತಾಯಿಗೆ ಪ್ರತಿ ತಿಂಗಳು 75 ಸಾವಿರ ಜೀವನಾಂಶ ನೀಡಲು ಹೈಕೋರ್ಟ್ ಆದೇಶಿಸಿದೆ.

ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಅರ್ಜಿದಾರ ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತೀ ತಿಂಗಳು 75 ಸಾವಿರ ರೂ. ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಯಗಳಿಗೆ ನ್ಯಾಯಾಲಯ ತಡೆ ನೀಡಿದೆ.

ಅಲ್ಲದೆ ಅರ್ಜಿದಾರರು ಮುಂದಿನ ಒಂದು ವಾರದ ಒಳಗೆ ಸಂತ್ರಸ್ತೆಗೆ 75 ಸಾವಿರ ರೂ.ಗಳನ್ನು ಪಾವತಿಸಬೇಕು. ಅದಾದ ನಂತರ ಪ್ರತೀ ತಿಂಗಳು ಹಣ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ ಸಂತ್ರಸ್ತೆಯ ಪೋಷಕರು ಹಾಗೂ ಸಂಬಂಧಿಕರು ಯಾವುದೇ ರೀತಿಯ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದೆಂದು ಕೋರ್ಟ್ ಇದೇ ವೇಳೆ ತಿಳಿಸಿದೆ.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಆರೋಪಿಯ ಪೋಷಕರು ಪ್ರಕರಣವನ್ನು ರಾಜಿಸಂಧಾನದ ಮೂಲಕ ಸಮಾಪ್ತಿಗೊಳಿಸಲು ₹50 ಲಕ್ಷದ ಆಮಿಷ ಒಡ್ಡಿರುವುದಾಗಿ ತಿಳಿದು ಬಂದಿದೆ’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ತಂದರು.
ಇದನ್ನು ಬಲವಾಗಿ ಅಲ್ಲಗಳೆದ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪಿ.ಪಿ.ಹೆಗ್ಡೆ, ‘ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರಶ್ನಿತ ಕೃತ್ಯಗಳು ಸಂಪೂರ್ಣ ಸಮ್ಮತಿಯಿಂದಲೇ ಜರುಗಿವೆ. ನ್ಯಾಯಪೀಠ ಉದಾರ ಭಾವನೆ ತೋರಿದರೆ ಉಭಯ ಪಕ್ಷಗಾರರು ಪ್ರಕರಣವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಆದರೆ, ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಪೀಠ, ‘ಸಂತ್ರಸ್ತೆ ಮತ್ತು ಆಕೆಯ ಬಡಕುಟುಂಬ ಎದುರಿಸುತ್ತಿರುವ ಕಷ್ಟಗಳನ್ನು ಕಡೆಗಣಿಸಲಾಗದು. ತಾಯಿ–ಮಗು ಇಬ್ಬರೂ ದುರ್ಬಲ ಮತ್ತು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯುವತಿಯೊಬ್ಬಳ ಸುಂದರ ಕನಸುಗಳನ್ನು ಮತ್ತು ಭವಿಷ್ಯವನ್ನು ಮಸುಕಾಗಿಸಿ ಆಕೆಯನ್ನು ಅಕಾಲಿಕವಾಗಿ ತಾಯ್ತನದ ಜವಾಬ್ದಾರಿಗಳಿಗೆ ತಳ್ಳಿರುವ ಆರೋಪಿಯ ನಡೆ ಒಪ್ಪತಕ್ಕದ್ದಲ್ಲ’ ಎಂದು ತೀವ್ರ ಆಘಾತ ವ್ಯಕ್ತಪಡಿಸಿದೆ.
‘ಈ ವಿಷಯದಲ್ಲಿ ಅರ್ಜಿದಾರ ಇನ್ನೂ ವಿದ್ಯಾರ್ಥಿ ಎಂಬುದು ಹೊರೆಯಿಂದ ನುಣುಚಿಕೊಳ್ಳಲು ಸಕಾರಣ ಎನಿಸುವುದಿಲ್ಲ. ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವ ಭರವಸೆಗೆ ಎಳ್ಳು ನೀರು ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಶ್ರೀಕೃಷ್ಣ ರಾವ್ ಪೋಷಕರೂ ಆರೋಪಿಗಳಾಗಿರುವುದು ಪ್ರಕರಣದ ಗಹನತೆಯನ್ನು ಎತ್ತಿ ತೋರಿಸುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ