ಪುತ್ತೂರು ಜುಲೈ 08: ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಹತ್ತು ವರ್ಷದ ಹಿಂದೆ ನಿವೃತ್ತರಾದ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಆಯೋದ್ಯೆ ರಾಮಮಂದಿರದ ಕಳವು ಪ್ರಕರಣದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯ ನಾಯಕರು ಭಾಗಿಯಾಗಿರುವ ಶಂಕೆಯಿದ್ದು, ಈ ಪ್ರಕರಣದ ಸೂಕ್ತ ತನಿಖೆ ನಡೆಯಬೇಕಿದೆ. ಆದರೆ ಇತ್ತೀಚೆಗೆ ನಿವೃತ್ತಿಹೊಂದಿದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಬದಲು ಹತ್ತು ವರ್ಷದ ಹಿಂದೆ ನಿವೃತ್ತಿ ಹೊಂದಿದ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆ ನಡೆಯಬೇಕಿದೆ. ಇತ್ತೀಚಿಗೆ ನಿವೃತ್ತಿ ಹೊಂದಿದ ನ್ಯಾಯಾಧೀಶರಿಂದ ತನಿಖೆ ಸರಿಯಾಗಿ ನಡೆಯುವ ವಿಶ್ವಾಸವಿಲ್ಲ.
ಈ ಪ್ರಕರಣದಲ್ಲಿ ಬಿಜೆಪಿಯ ಪ್ರಮುಖ ನಾಯಕರು, ಆರ್.ಎಸ್.ಎಸ್ ನ ಪ್ರಮುಖ ನಾಯಕರ ಕೈವಾಡವಿದ್ದು, ಪ್ರಧಾನಿ ನರೇಂದ್ರ ಮೋದಿಯೇ ರಾಮ ಮಂದಿರದ ಆಡಳಿತ ಸಮಿತಿಯನ್ನು ರಚಿಸಿರುವ ಕಾರಣ ಪ್ರಕರಣದ ಗಂಭೀರತೆಯನ್ನು ಅರಿತುಕೊಳ್ಳಬೇಕಿದೆ ಎಂದರು. ದೇಣಿಗೆಯ ಹೆಸರಿನಲ್ಲಿ ಬಂದ ಸಾವಿರಾರು ಕೋಟಿ ಹಣವನ್ನು ರಾಮಜನ್ಮ ಭೂಮಿ ಟ್ರಸ್ಟ್ ಗುಳುಂ ಮಾಡಿದ್ದು, ಇದು ರಾಮನಿಗೆ ಮಾಡಿದ ಅನ್ಯಾಯ ಎಂದ ಅವರು ಬಿಜೆಪಿ, ಆರ್.ಎಸ್.ಎಸ್ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಇನ್ನು ಜೈ ಶ್ರೀರಾಮ್ ಹೇಳುವ ಹಕ್ಕಿಲ್ಲ, ಅವರು ಇನ್ನು ಜೈ ಸ್ವಾಹಾ ಮಾತ್ರ ಹೇಳಬಹುದು ಎಂದರು.