ಉಡುಪಿ ಜನವರಿ 27: ಮಾಜಿ ಸೈನಿಕರೋರ್ವರಿಗೆ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಅವಮಾನಿಸಿದ ಘಟನೆ ರವಿವಾರ ನಡೆದಿದೆ. ಟೋಲ್ ವಿನಾಯಿತಿಗೆ ಕೇಂದ್ರ ಸರಕಾರದ ಅಧಿಕೃತ ಆದೇಶಪತ್ರವಿದ್ದರೂ ಅದನ್ನು ಪರಿಗಣಿಸದೆ ಟೋಲ್ ಸಿಬಂದಿ ಅಗೌರವ ತೋರಿದ್ದು, ಸ್ವತಃ ಮಾಜಿ ಯೋಧ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ತಿಳಿಸಿರುವ ಅವರು ನಿವೃತ್ತ ಸೇನಾ ಕಮಾಂಡರ್ ಶ್ಯಾಮರಾಜ್ ಅವರಿಗೆ ಸಾಸ್ತಾನದ ಟೋಲ್ ಗೇಟ್ನಲ್ಲಿ ಆಗಿರುವ ಅಪಮಾನಕಾರಿ ವಿದ್ಯಮಾನ ನೋವಿನ ಸಂಗತಿ. ತಕ್ಷಣ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಇಂತಹಾ ಘಟನೆಗಳು ಮರುಕಳಿಸದಂತೆ, ರಾಷ್ಟ್ರಸೇವಕ ಸೈನಿಕರಿಗೆ ಅಪಮಾನ ಆಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖಂಡನೆ ವ್ಯಕ್ತಪಡಿಸಿ ನಿವೃತ್ತ ಯೋಧರ ಸಂಘದಿಂದ ಸೋಮವಾರ ಸ್ಥಳೀಯರ ಸಹಕಾರದಲ್ಲಿ ಟೋಲ್ನಲ್ಲಿ ಪ್ರತಿಭಟನೆ ನಡೆಯಿತು.
ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದ ವೇಳೆಯುದ್ಧದಲ್ಲಿ ಭಾಗವಹಿಸಿ ಅಂಗವೈಕಲ್ಯಕ್ಕೊಳಗಾಗಿ ರುವ ಕಾಸರಗೋಡು ಜಿಲ್ಲೆಯ ಶ್ಯಾಮರಾಜ್ ಅವರಿಗೆ ಯುದ್ಧ ಸಂತ್ರಸ್ತರ ನೆಲೆಯಲ್ಲಿ ಭಾರತದ ಎಲ್ಲ ಟೋಲ್ಗಳಲ್ಲಿ ಶುಲ್ಕ ವಿನಾಯಿತಿ ಸೌಲಭ್ಯವಿದೆ. ಅವರ ಪತ್ನಿ ಕೂಡ ಸೇನೆಯಲ್ಲಿ ನರ್ಸಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿಯ ಉದ್ಯೋಗಕ್ಕೆ ಸಂಬಂಧಿಸಿ ಕಾಸರಗೋಡಿನಿಂದ ಕಾರವಾರ ಕಡೆ ರವಿವಾರ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ಯಾಮ ರಾಜ್ ಅವರು ಸಾಸ್ತಾನ ಟೋಲ್ನಲ್ಲಿ ತಮ್ಮ ಮಾಜಿ ಸೈನಿಕ ಹಾಗೂ ಯುದ್ಧ ಸಂತ್ರಸ್ತರ ಗುರುತು ಚೀಟಿಯನ್ನು ತೋರಿಸಿ ವಿನಾಯಿತಿ ಕೋರಿದ್ದರು. ಆಗ ಸಿಬಂದಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ ಮತ್ತು ಅನಂತರ ಬಹಳ ಸಮಯ ಟೋಲ್ ಗೇಟ್ನಲ್ಲೇ ಅವರನ್ನು ತಡೆದರು. ಬಳಿಕ ಕಾರಿನಿಂದ ಇಳಿದ ಶ್ಯಾಮರಾಜ್ ತಮಗಾದ ಸಮಸ್ಯೆ ಬಗ್ಗೆ ವಿಡಿಯೋ ಮಾಡಿದ್ದರು.