ಕುಂದಾಪುರ, ಫೆಬ್ರವರಿ 19: ಲಕ್ಷಾಂತರ ಮೌಲ್ಯದ ವಸ್ತುಗಳಿದ್ದ ಎರಡು ಬ್ಯಾಗ್ ಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಸಿಕ್ಕವರು ಪೊಲೀಸರ ಸಮ್ಮುಖದಲ್ಲಿ ಹಸ್ತಾಂತರಿ ಪ್ರಾಮಾಣಿಕತೆ ಮೆರೆದ ಘಟನೆ ಒಂದೇ ದಿನದಲ್ಲಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.

ಮೊದಲ ಪ್ರಕರಣದಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಸುಮಾರು 15 ಸಾವಿರ ರೂಪಾಯಿ ನಗದು ಹಣವಿದ್ದ ಬ್ಯಾಗನ್ನು ಹೆಸರು ಹೇಳಲು ಇಚ್ಚಿಸದ ಪ್ರವಾಸಿಗರೊಬ್ಬರು ತಂದು ಠಾಣೆಗೆ ಒಪ್ಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅಭಿಷೇಕ್ ಎಂಬ ಕೇರಳದ ಕೊಲ್ಲಂ ಪೊಲೀಸ್ ಠಾಣೆಯ ಸಿಬ್ಬಂದಿ ಪತ್ನಿಯ ಸುಮಾರು 3 ಸಾವಿರ ರೂ. ನಗದು ಮತ್ತು ಐಫೋನ್ ಮೊಬೈಲ್ ಇದ್ದ ಬ್ಯಾಗನ್ನು ಕೊಡಚಾದ್ರಿ ಜೀಪ್ ಚಾಲಕ ಮುದೂರಿನ ಶರತ್ ಎನ್ನುವರು ಠಾಣೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಎರಡು ಪ್ರತ್ಯೇಕ ಘಟನೆಯಲ್ಲಿ ನಗ-ನಗದು ಕಳೆದುಕೊಂಡವರಿಗೆ ಅವರ ವಸ್ತುಗಳನ್ನು ಕೊಲ್ಲೂರು ಪೊಲೀಸ್ ಠಾಣೆಯ ಮುಖಾಂತರ ಹಸ್ತಾಂತರಿಸಿದ್ದು ಪ್ರವಾಸಿಗ ಮತ್ತು ಜೀಪ್ ಚಾಲಕರ ಪ್ರಾಮಾಣಿಕತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



