ಮಡಿಕೇರಿ ಎಪ್ರಿಲ್ 05: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಕೇರಳದ ಯುವತಿ ಶರಣ್ಯಾ (35) ಅವರಿಗಾಗಿ ತೀವ್ರ ಶೋಧ ಮುಂದುವರಿದಿದೆ. ಘಟನೆ ನಡೆದು ಮೂರು ದಿನ ಕಳೆದರೂ ಯುವತಿಯ ಪತ್ತೆಯಾಗದ ಹಿನ್ನೆಲೆಯಲ್ಲಿ, ಇದೀಗ ನಕ್ಸಲ್ ನಿಗ್ರಹ ಪಡೆ (ANF) ಕೂಡ ಕಾರ್ಯಾಚರಣೆಗೆ ಇಳಿದಿದೆ.

ಕೇರಳದ ಕೋಯಿಕ್ಕೋಡ್ ನಿವಾಸಿ ಹಾಗೂ ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಶರಣ್ಯಾ, ಕಕ್ಕಬ್ಬೆಯ ಹೋಂಸ್ಟೇಯೊಂದರಲ್ಲಿ ತಂಗಿದ್ದರು. ಏಪ್ರಿಲ್ 2ರಂದು ಬೆಳಗ್ಗೆ ಚಾರಣಕ್ಕೆಂದು ಅರಣ್ಯ ಇಲಾಖೆ ಚೆಕ್ಪೋಸ್ಟ್ ಬಳಿ ಬಂದಿದ್ದ ಅವರನ್ನು ಸುರಕ್ಷತೆಯ ದೃಷ್ಟಿಯಿಂದ ಮತ್ತೊಂದು ಪ್ರವಾಸಿಗರ ತಂಡದೊಂದಿಗೆ ಕಳುಹಿಸಲಾಗಿತ್ತು. ಆದರೆ, ಮಧ್ಯಾಹ್ನ 1:30ಕ್ಕೆ ವಾಪಸ್ ಬರಬೇಕಿದ್ದ ಶರಣ್ಯಾ ಬರದಿರುವುದು ಆತಂಕಕ್ಕೆ ಕಾರಣವಾಯಿತು.
ಹೋಂಸ್ಟೇ ಮಾಲೀಕರು ಫೋನ್ ಮಾಡಿದಾಗ ಮೊದಲು ಸಂಪರ್ಕ ಸಿಕ್ಕಿರಲಿಲ್ಲ. ನಂತರ ಕರೆ ಸ್ವೀಕರಿಸಿದ ಶರಣ್ಯಾ, ‘ದಾರಿ ತಪ್ಪಿದ್ದೇನೆ’ ಎಂದು ಗಾಬರಿಯಿಂದ ಹೇಳಿದ್ದರು. ಅಷ್ಟರಲ್ಲೇ ಫೋನ್ ಸಂಪರ್ಕ ಕಡಿತಗೊಂಡಿದ್ದು, ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅರಣ್ಯ ಇಲಾಖೆ, ಪೊಲೀಸ್ ಮತ್ತು ಸ್ಥಳೀಯರು ಸತತವಾಗಿ ಹುಡುಕಾಟ ನಡೆಸುತ್ತಿದ್ದರೂ ದಟ್ಟ ಅರಣ್ಯ ಮತ್ತು ಕಾಡಾನೆಗಳ ಹಾವಳಿಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪ್ರಸ್ತುತ ನಕ್ಸಲ್ ನಿಗ್ರಹ ಪಡೆ ಬೆಟ್ಟದ ದುರ್ಗಮ ಹಾದಿಗಳಲ್ಲಿ ಶೋಧ ನಡೆಸುತ್ತಿದೆ.