LATEST NEWS
ಜಲಪ್ರಳಯದ ಪರಿಣಾಮ ದೇವಾಲಯಗಳಲ್ಲಿ ಭಕ್ತರ ಪ್ರಮಾಣ ಭಾರೀ ಇಳಿಮುಖ
ಜಲಪ್ರಳಯದ ಪರಿಣಾಮ ದೇವಾಲಯಗಳಲ್ಲಿ ಭಕ್ತರ ಪ್ರಮಾಣ ಭಾರೀ ಇಳಿಮುಖ
ಮಂಗಳೂರು ಅಗಸ್ಟ್ 23: ಕರಾವಳಿಯ ದೇವಾಲಯಗಳಲ್ಲಿ ಭಕ್ತರ ಪ್ರಮಾಣ ಭಾರಿ ಇಳಿಮುಖವಾಗಿದೆ. ಪ್ರಮುಖವಾಗಿ ರಾಜ್ಯದ ಶ್ರೀಮಂತ ದೇಗುಲವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಉಡುಪಿಯ ಕೊಲ್ಲೂರು ಮೂಕಾಂಬಿಕ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಕೆಲವು ಪ್ರದೇಶಗಳು ಜಲಾವೃತಗೊಂಡಿದ್ದು ಎಲ್ಲ ಸೇತುವೆಗಳು ಮುಳುಗಿ ದೇವಸ್ಥಾನದ ಸಂಪರ್ಕ ಕಡಿತವಾಗಿತ್ತು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿತ್ತು.
ಅಲ್ಲದೆ ಬೆಂಗಳೂರು-ಮಂಗಳೂರು ನಡುವಿನ ಶಿರಾಡಿ ಹೆದ್ದಾರಿ, ಹಾಸನ-ಸಕಲೇಶಪುರ ಕಡೆಗೆ ಸಂಪರ್ಕಕಲ್ಪಿಸುವ ಬಿಸಿಲೆ ಘಾಟಿ ರಸ್ತೆ, ಸುಬ್ರಹ್ಮಣ್ಯ-ಸುಳ್ಯ-ಸಂಪಾಜೆ-ಮಡಿಕೇರಿ, ಮೈಸೂರು ಹಾಗೂ ಕೇರಳಕ್ಕೂ ಸಂಪರ್ಕ ಕಲ್ಪಿಸುವ ರಸ್ತೆಗಳು ಮಾರ್ಗಮಧ್ಯೆ ಉಂಟಾದ ಭೂಕುಸಿತದಿಂದ ವಾಹನ ಓಡಾಟವಿಲ್ಲ.ಬೆಂಗಳೂರು-ಮಂಗಳೂರು ನಡುವಿನ ರೈಲು ಯಾನ ಕೂಡ ಸ್ಥಗಿತಗೊಂಡಿದೆ ಇದು ಕೂಡ ಭಕ್ತರ ಸಂಖ್ಯೆ ಇಳಿಕೆಗೆ ಕಾರಣವಾಗಿದೆ.
ಉಡುಪಿಯ ಕೊಲ್ಲೂರು ದೇವಾಲಯಕ್ಕೆ ರಾಜ್ಯ ಹೊರತು ಪಡಿಸಿದರೆ ಕೇರಳದಿಂದ ಅತೀ ಹೆಚ್ಚು ಭಕ್ತರು ಆಗಮಿಸುತ್ತಿದ್ದಾರೆ.ಆದರೆ ಕೇರಳದಲ್ಲಿ ಅತಿವೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ತೊಂದರೆ ಮತ್ತು ಅನಾಹುತಗಳು ಸಂಭವಿಸಿದ್ದರ ಪರಿಣಾಮ ಅಲ್ಲಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಭಕ್ತರು ಇಲ್ಲಿನ ದೇವಾಲಯಗಳಿಗೆ ಬರುವುದು ಅನುಮಾನವಾಗಿದೆ.
ಇದರಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರವಾಸಿಗರು ಇಲ್ಲದೆ ದೇವಾಲಯದ ಆವರಣದಲ್ಲಿರುವ ವ್ಯಾಪಾರಸ್ತರಿಗೂ ವ್ಯಾಪಾರವಿಲ್ಲ. ದೇವಾಲಯಗಳ ಆದಾಯ ಕೂಡ ಗಣನೀಯವಾಗಿ ಕುಸಿತಗೊಂಡಿದೆ.
You must be logged in to post a comment Login