ಕೊಚ್ಚಿ ಜುಲೈ 04: ಅಪರೂಪದಲ್ಲೇ ಅಪರೂಪದ ಹಾಗೂ ಮಾರಣಾಂತಿಕ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ’ (SMA – ಟೈಪ್ 1) ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಏಳು ತಿಂಗಳ ಮಗು ಮಿಯಾ ಮಾರಿಯಾಳ ಪ್ರಾಣ ಉಳಿಸಲು ಇಡೀ ಕೇರಳ ರಾಜ್ಯವೇ ಧಾವಿಸಿ ಬಂದಿದೆ. ಕೇವಲ ಕೆಲವೇ ದಿನಗಳಲ್ಲಿ ಬರೋಬ್ಬರಿ 16.5 ಕೋಟಿ ರೂಪಾಯಿಗಳ ಬೃಹತ್ ನಿಧಿಯನ್ನು ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡುವ ಮೂಲಕ ಮನುಷ್ಯತ್ವ ಇನ್ನು ಬದುಕಿದೆ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.

ಮುವಾಟ್ಟುಪುಳ ಮೂಲದ ನಿಮ್ಮಿ ಜೋಶಿ ಮತ್ತು ಜಿನು ಜಾರ್ಜ್ ದಂಪತಿಯ ಪುತ್ರಿ ಮಿಯಾ ಮಾರಿಯಾಳ ಚಲನವಲನಗಳು ದಿನೇ ದಿನೇ ಕ್ಷೀಣಿಸುತ್ತಿದ್ದವು. ಆಸ್ಟರ್ ಮೆಡ್ಸಿಟಿ ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿದ ಆನುವಂಶಿಕ ಪರೀಕ್ಷೆಯಲ್ಲಿ ಮಗುವಿಗೆ ಎಸ್ಎಂಎ ಟೈಪ್ 1 ಇರುವುದು ಮೇ 13 ರಂದು ದೃಢಪಟ್ಟಿತ್ತು.
“ವೈದ್ಯರು ಮಗುವಿಗೆ ಅತ್ಯಂತ ದುಬಾರಿಯಾದ ಜೀನ್ ಚಿಕಿತ್ಸೆಯೊಂದೇ ಬದುಕಿನ ಏಕೈಕ ಭರವಸೆ ಎಂದು ಹೇಳಿದ್ದರು. ಚಿಕಿತ್ಸೆ ಸಿಗದಿದ್ದರೆ ರೋಗವು ಮಗುವಿನ ಸ್ನಾಯುಗಳನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿ, ಉಸಿರಾಟ ನಿಲ್ಲಿಸಿ, ಮೊದಲ ವರ್ಷದ ಒಳಗೇ ಜೀವಕ್ಕೆ ಸಂಚಕಾರ ತರುತ್ತದೆ ಎಂದು ಎಚ್ಚರಿಸಿದ್ದರು” ಎಂದು ತಾಯಿ ನಿಮ್ಮಿ ಕಣ್ಣೀರಿಡುತ್ತಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮಗುವಿಗೆ ಈಗಾಗಲೇ ಉಸಿರಾಟದ ತೊಂದರೆ ಆರಂಭವಾಗಿದ್ದು, ಸದ್ಯ ಎರ್ನಾಕುಲಂನ ಅಮೃತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆಗೆ ಬರೋಬ್ಬರಿ 16.5 ಕೋಟಿ ರೂಪಾಯಿ ಬೇಕಾಗಿದ್ದರಿಂದ ಪೋಷಕರು ಸ್ಥಳೀಯ ಪಂಚಾಯತ್ ಅಧಿಕಾರಿಗಳೊಂದಿಗೆ ಜಂಟಿ ಬ್ಯಾಂಕ್ ಖಾತೆ ತೆರೆದು ‘ಸೇವ್ ಬೇಬಿ ಮಿಯಾ’ ಎಂಬ ಡಿಜಿಟಲ್ ಅಭಿಯಾನ ಆರಂಭಿಸಿದ್ದರು. ಈ ಮಗುವನ್ನು ಎಂದೂ ನೋಡದ, ಭೇಟಿಯಾಗದ ಸಾವಿರಾರು ಅನಾಮಧೇಯರು ಅಭಿಯಾನಕ್ಕೆ ಧಾವಿಸಿ ಬಂದರು. ಬಡವರು ತಮ್ಮ ಕೈಲಾದ 10 ರೂಪಾಯಿ ನೀಡಿದರೆ, ಶ್ರೀಮಂತರು ಲಕ್ಷ ಲಕ್ಷ ರೂಪಾಯಿಗಳನ್ನು ಖಾತೆಗೆ ಜಮೆ ಮಾಡಿದರು. ಮುವಾಟ್ಟುಪುಳದ ಸಮಾಜ ಸೇವಕ ಮುಹಮ್ಮದ್ ಸಬೀರ್ ಸೇರಿದಂತೆ ನೂರಾರು ಸಾಮಾಜಿಕ ಜಾಲತಾಣದ ವೀರರು ಈ ಅಭಿಯಾನವನ್ನು ಜಗತ್ತಿನಾದ್ಯಂತ ಹರಡಲು ಹಗಲಿರುಳು ಶ್ರಮಿಸಿದರು.
ನಿಗದಿತ ಗುರಿಯಾದ 16.5 ಕೋಟಿ ರೂಪಾಯಿ ಸಂಗ್ರಹವಾಗುತ್ತಿದ್ದಂತೆಯೇ, ಅಭಿಯಾನದ ಅಧಿಕೃತ ಪುಟವು ದೇಣಿಗೆ ಸ್ವೀಕರಿಸುವುದನ್ನು ನಿಲ್ಲಿಸಿದೆ. “ನಮ್ಮ ಮಗುವಿನೊಂದಿಗೆ ನಿಂತ ಎಲ್ಲರಿಗೂ ನಾವು ಅಪಾರ ಕೃತಜ್ಞರಾಗಿದ್ದೇವೆ. ನಿಮ್ಮ ಪ್ರತಿಯೊಂದು ರೂಪಾಯಿ ಮತ್ತು ಪ್ರಾರ್ಥನೆ ಮಗುವಿಗೆ ಮರುಜನ್ಮ ನೀಡಿದೆ. ಒಟ್ಟಾಗಿ ಸೇರಿದರೆ ಪವಾಡಗಳನ್ನು ಮಾಡಬಹುದು ಎಂಬುದನ್ನು ಜಗತ್ತು ತೋರಿಸಿಕೊಟ್ಟಿದೆ” ಎಂದು ಮಗುವಿನ ಪೋಷಕರು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಸದ್ಯ ಕಾನೂನು ಮತ್ತು ವೈದ್ಯಕೀಯ ಪ್ರಕ್ರಿಯೆಗಳು ಮುಗಿದ ತಕ್ಷಣ ಮಗುವಿಗೆ ಜೀನ್ ಥೆರಪಿ ಚಿಕಿತ್ಸೆ ಆರಂಭವಾಗಲಿದೆ.