ಕೇರಳ ಜನವರಿ 08: ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡುವಿನಲ್ಲಿ ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಭಿಕ್ಷುಕನ ಬಳಿ ಬರೋಬ್ಬರಿ 4.5 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ಸ್ಥಳೀಯ ಆಸ್ಪತ್ರೆಯ ದಾಖಲೆಗಳ ಪ್ರಕಾರ ಕಾಯಂಕುಲಂನ ಅನಿಲ್ ಕಿಶೋರ್ ಎಂಬ ವ್ಯಕ್ತಿ ಸ್ಥಳೀಯಾಗಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಸೋಮವಾರ ಸಂಜೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅನಿಲ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದ್ದು , ಚಿಕಿತ್ಸೆ ನೀಡಲಾಗಿತ್ತು, ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮರುದಿನ ಸ್ಥಳೀಯ ಅಂಗಡಿಯೊಂದರ ಹೊರಗೆ ಮೃತಪಟ್ಟಿದ್ದಾರೆ.
ನೂರಾನಾಡ್ ಪೊಲೀಸರು ಆತನ ಮೃತದೇಹದ ಬಳಿ ದೊರೆತ ವಸ್ತುಗಳನ್ನು ಪರಿಶೀಲಿಸಿದಾಗ, ಪ್ಲಾಸ್ಟಿಕ್ ಟಿನ್ ಮತ್ತು ಪರ್ಸ್ಗಳಲ್ಲಿ ಪ್ಯಾಕ್ ಮಾಡಲಾದ ರೀತಿಯಲ್ಲಿ ನೋಟಿ ಕಂತೆಗಳು ಸಿಕ್ಕಿವೆ. ಅದರಲ್ಲಿ 2 ಸಾವಿರ ರೂಪಾಯಿ ನೋಟು , ವಿದೇಶಿ ಕರೇನ್ಸಿಗಳು ಇದ್ದು, ಒಟ್ಟು ಸುಮಾರು 4.5ಲಕ್ಷ ಹಣ ಇತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಭಿಕ್ಷುಕನ ಸಂಬಂಧಿಕರು ಯಾರೂ ಇಲ್ಲದ ಕಾರಣ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೂ ಭಿಕ್ಷುಕನೊಬ್ಬ ಲಕ್ಷಾಂತರ ರೂಪಾಯಿ ಹಣ ಇದ್ದರೂ ಅದನ್ನು ಬಳಸದೇ ಮತ್ತೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಿದ್ದು, ಆಶ್ಚರ್ಯ ತಂದಿದೆ.



