ತಿರುವನಂತಪುರಂ ಮೇ 07: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಕಾವೇರಿದೆ. ಈ ನಡುವೆ ಮಲಯಾಳಂನ ಖ್ಯಾತ ನಟ ಸಿದ್ದಿಕ್ (Actor Siddique) ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ನೇರ ಸವಾಲು ಹಾಕಿದ್ದಾರೆ.

ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ. ಸತೀಶನ್ (V.D. Satheesan) ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬುದು ಸಿದ್ದಿಕ್ ಅವರ ಆಗ್ರಹ. “ಈ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ ಎಂದು ಎದೆಯುಬ್ಬಿಸಿ ಹೇಳಿದ್ದ ಏಕೈಕ ನಾಯಕ ಸತೀಶನ್. ಅಂತಹ ಜನನಾಯಕನನ್ನು ಬಿಟ್ಟು ಬೇರೆಯವರನ್ನು ಸಿಎಂ ಮಾಡಿದರೆ ಜನ ಕ್ಷಮಿಸುವುದಿಲ್ಲ,” ಎಂದು ಸಿದ್ದಿಕ್ ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿದ್ದಿಕ್ “ವಿ.ಡಿ. ಸತೀಶನ್ ಅವರನ್ನು ಹೊರತುಪಡಿಸಿ ರಾಹುಲ್ ಗಾಂಧಿಯವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದರೂ ನಾವು ಒಪ್ಪುವುದಿಲ್ಲ. ಅಷ್ಟರಮಟ್ಟಿಗೆ ಜನರು ಸತೀಶನ್ ನಾಯಕತ್ವವನ್ನು ನಂಬಿದ್ದಾರೆ,” ಎಂದು ಸಿದ್ದಿಕ್ ಬರೆದುಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಅಧಿಕಾರಕ್ಕಾಗಿನ ಒಳಜಗಳ ಮತ್ತು ಗುಂಪುಗಾರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, “ಸಾಮಾನ್ಯ ಜನರ ಆಸೆಯಂತೆ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ,” ಎಂದು ಎಚ್ಚರಿಸಿದ್ದಾರೆ.
ಯಾವುದೇ ಸಮುದಾಯದ ನಾಯಕರ ಮುಂದೆ ಮಣಿಯದ ಮತ್ತು ಜಾತ್ಯತೀತ ನಿಲುವನ್ನು ಹೊಂದಿರುವ ಸತೀಶನ್ ಅವರ ಶೈಲಿಯನ್ನು ಸಿದ್ದಿಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಒಂದೆಡೆ ರಮೇಶ್ ಚೆನ್ನಿತ್ತಲ ಮತ್ತು ಮತ್ತೊಂದೆಡೆ ವಿ.ಡಿ. ಸತೀಶನ್ ಅವರ ನಡುವೆ ಸಿಎಂ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಆಡಳಿತಕ್ಕೆ ಅಂತ್ಯ ಹಾಡಿರುವ ಯುಡಿಎಫ್, ಈಗ ಮುಖ್ಯಮಂತ್ರಿ ಆಯ್ಕೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.