ಕಾಸರಗೋಡು ಮಾರ್ಚ್ 19: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಗುರುವಾರ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪಕ್ಷವು ಇದುವರೆಗೆ ಒಟ್ಟು 86 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಅವರು ಅರಣ್ಮುಲ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕುಂದರ ವಿಧಾನಸಭಾ ಕ್ಷೇತ್ರದಿಂದ ಸಾಮಾಜಿಕ ಜಾಲತಾಣ ಪ್ರಭಾವಿ ಹಾಗೂ ರಿಯಾಲಿಟಿ ಶೋ ಖ್ಯಾತಿಯ ಡಾ. ರಾಬಿನ್ ರಾಧಾಕೃಷ್ಣನ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಗುರುವಾಯೂರು ಕ್ಷೇತ್ರದಿಂದ ವಕೀಲ ಬಿ. ಗೋಪಾಲಕೃಷ್ಣನ್ ಸ್ಪರ್ಧಿಸಲಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಿಂದ ಸ್ಪರ್ಧಿಸಿದ್ದ ಅಶ್ವಿನಿ ಅವರು ಮೂರನೇ ಸ್ಥಾನ ಪಡೆದಿದ್ದರು ಅಲ್ಲದೆ ಬಿಜೆಪಿಯು ಶೇ. 19.73ರಷ್ಟು ಮತಗಳನ್ನು ಗಳಿಸುವ ಮೂಲಕ ಪಕ್ಷದ ಬಲ ಹೆಚ್ಚಿಸಿದ್ದರು. ಆದರೆ, ಮಂಜೇಶ್ವರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅಶ್ವಿನಿ ಅವರಿಗೆ ಕಾಸರಗೋಡು ಟಿಕೆಟ್ ನೀಡಲಾಗಿದ್ದು. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಅರ ವಿರುದ್ದ ಆಂತರಿಕ ಭಿನ್ನಾಭಿಪ್ರಾಯ ಇತ್ತು ಎಂದು ಹೇಳಲಾಗಿದೆ.