ಪುತ್ತೂರು ಡಿಸೆಂಬರ್ 21: ಕೇಪು ಉಳ್ಳಾಲ್ತಿ ದೈವಸ್ಥಾನದ ಬಳಿ ನಡೆದ ಕೋಳಿ ಅಂಕಕ್ಕೆ ಪೊಲೀಸರ ದಾಳಿ ಪ್ರಕರಣ ಇದೀಗ ರಾಜಕೀಯ ವಿವಾದಕ್ಕೆ ತಿರುಗಿದ್ದು, ಇಂದು ಬಿಡೆಪಿ ನಿಯೋಗ ಕೇಪುವಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದೆ.

ಕೇಪು ಉಳ್ಳಾಲ್ತಿ ದೈವಸ್ಥಾನದ ಬಳಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ಮಾಡಿ ತಡೆ ಒಡ್ಡಿದ್ದರು, ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರು ಕೋಳಿ ಅಂಕ ನಡೆಸಲು ಅನುಮತಿ ನೀಡಿದ್ದರು, ಬಳಿಕ ಪೊಲೀಸರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 16 ಮಂದಿ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ, ಈ ಘಟನೆ ಇದೀಗ ವಿವಾದಕ್ಕೆ ತಿರುಗಿದ್ದು, ಇಂದು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ನಿಯೋಗ ಕೇಪುವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ವೇಳೆ ಮಾತನಾಡಿದ ಸತೀಶ್ ಕುಂಪಲ ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ಕಾಂಗ್ರೇಸ್ ಸರಕಾರ ತಡೆಯೊಡ್ಡುತ್ತಿದೆ ಎಂದು ಆರೋಪಿಸಿದರು. ಕರಾವಳಿಯಲ್ಲಿ ದೈವಾರಾಧನೆಯ ಜೊತೆಗೆ ಕೋಳಿ ಅಂಕ ಸೇರಿಕೊಂಡಿದೆ. ದೈವಗಳ ನೇಮ ಆಗುವ ಮೊದಲು ಕೋಳಿ ಅಂಕ ನಡೆದು ಆ ಜಾಗದಲ್ಲಿ ಕೋಳಿಯ ರಕ್ತ ಬೀಳಬೇಕು ಎನ್ನುವ ನಂಬಿಕೆ. ಈ ತನಕ ನಿರಾತಂಕವಾಗಿ ಕೋಳಿ ಅಂಗಕ ನಡೆದುಕೊಂಡು ಬರುತ್ತಿತ್ತು, ಆದರೆ ಕಾಂಗ್ರೇಸ್ ಸರಕಾರ ಪೋಲೀಸರಿಂದ ಕರಾವಳಿಯ ಸಂಪ್ರದಾಯವನ್ನು ಮುಗಿಸುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು.
ಕಂಬಳ, ಕೋಳಿ ಅಂಕ ಕರಾವಳಿ ಜನರ ಸಂಸ್ಕೃತಿಯಲ್ಲಿ ಬೆಸೆದುಕೊಂಡಿದೆ. ಈ ಭಾಗದ ಜನ ಮನೆಯಲ್ಲಿ ಸಾಕಿದ ಕೋಳಿಗಳನ್ನು ತಮ್ಮ ತಮ್ಮ ಗ್ರಾಮದ ಜಾತ್ರೆಯಲ್ಲಿ ನಡೆಯುವ ಕೋಳಿ ಅಂಕದಲ್ಲಿ ಕೋಳಿ ಕಾಳಗ ಮಾಡುತ್ತಾರೆ. ಯಾವುದೇ ಜೂಜಿಲ್ಲದೆ, ಮನೋರಂಜನೆಗಾಗಿ ಮಾಡುವ ಅಂಕ. ಕೋಳಿ ಅಂಕ ಮಾಡುವಂತೆ ಸ್ಥಳೀಯರಿಗೆ ಸೂಚಿಸಿದ ಬಿಜೆಪಿ ನಾಯಕರು, ಪೋಲೀಸರ ಬಂಧಿಸಿದಲ್ಲಿ ನಾವೂ ನಿಮ್ಮ ಜೊತೆ ಠಾಣೆಗೆ ಬರುತ್ತೇವೆ ಎಂದು ಭರವಸೆ ನೀಡಿದರು.