ನಗರಗಳ ಅಭಿವೃದ್ದಿಗೆ ಕೆಂಪೇಗೌಡರು ಪ್ರೇರಣೆಯಾಗಲಿ -ದಿನಕರ ಬಾಬು
ಉಡುಪಿ, ಜೂನ್ 27 : ಯಾವುದೇ ಗ್ರಾಮ ಆಥವಾ ನಗರಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕಾದರೆ , ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಸಂದರ್ಭದಲ್ಲಿ ತೆಗೆದುಕೊಂಡ ಮುಂದಾಲೋಚನೆ ಕ್ರಮಗಳು ಹಾಗೂ ಅವರ ದೂರ ದೃಷ್ಠಿತ್ವ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಬುಧವಾರ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ , ಯು. ಕಮಲಬಾಯಿ ಪ್ರೌಡಶಾಲೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ಚಿಕ್ಕವರಾಗಿದ್ದಾಗ ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಕಂಡು ಅದೇ ರೀತಿಯ ನಗರ ನಿರ್ಮಾಣದ ಕನಸು ಕಂಡಿದ್ದು, ಅದೇ ರೀತಿಯಲ್ಲಿ ಬೆಂಗಳೂರು ನಗರವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ಮಾಡಿದ್ದರು, ಇಂದಿನ ಆಧುನಿಕ ನಗರಗಳ ನಿರ್ಮಾತೃರು ಈ ರೀತಿಯ ಮುಂದಾಲೋಚನೆ ವಹಿಸಬೇಕು, ಕೆಂಪೇಗೌಡರ ದೂರ ದೃಷ್ಠಿತ್ವ ಅವರಿಗೆ ಪ್ರೇರಣೆಯಾಗಬೇಕು, ಕೆಂಪೇಗೌಡರ ನಿರ್ಮಾಣದ ಬೆಂಗಳೂರು ಈಗ ಉದ್ಯಾನ ನಗರಿ, ಐಟಿ ಬಿಟಿ ನಗರವಾಗಿ ವಿಶ್ವಮಾನ್ಯವಾಗಿದೆ, ನಾಡು ನುಡಿಯ ಬೆಳವಣಿಗೆಗೆ ಶ್ರಮಿಸಿದ ಮಹನೀಯರನ್ನು ನೆನಯಲು ಅವರ ಜನ್ಮ ಜಯಂತಿ ಆಚರಣೆಗಳು ನಡೆಯಬೇಕು ಎಂದು ದಿನಕರ ಬಾಬು ಹೇಳಿದರು.