ಬೆಂಗಳೂರು ಮಾರ್ಚ್ 18: ಕೆಡಿ ಸಿನಿಮಾದ “ಸರ್ಸೆ ಸೆರಗ ಸರ್ಸೆ” ಹಾಡು ಸುತ್ತಲಿನ ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವಿವಾದಕ್ಕೆ ಕಾರಣವಾದ ಹಾಡನ್ನು ಹಿಂಪಡೆದು, ಹೊಸ ಹಾಡನ್ನು ರಚಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಯಾರಿಗೂ ನೋವು ಮಾಡುವ ಉದ್ದೇಶದಿಂದ ಈ ಹಾಡು ಬರೆದಿಲ್ಲ.. ಈ ಹಿಂದೆ ನಾನು ತಾಯಿ ಬಗ್ಗೆ, ದೇವರ ಬಗ್ಗೆ, ಪ್ರೀತಿ ಮತ್ತು ಸಹೋದರರ ಬಗ್ಗೆ ಹಾಡು ಬರೆದಿದ್ದೇನೆ. ನನ್ನ ಹಾಡುಗಳಿಗೆ ತುಂಬಾ ಪ್ರೀತಿ ಮತ್ತು ಪ್ರೋತ್ಸಾಹ ಕೊಟ್ಟಿದ್ದೀರಿ.. ಪ್ರೇಮ್ ಚಿತ್ರ ಬರುತ್ತದೆ ಎಂದರೆ ಎಲ್ಲರೂ ಹಾಡಿನ ಬಗ್ಗೆ ಕುತೂಹಲದಿಂದ ಇರುತ್ತಾರೆ. ಹಾಡುಗಳು ಅಷ್ಟರಮಟ್ಟಿಗೆ ವೈವಿಧ್ಯಮಯಾವಾಗಿರುತ್ತದೆ. ಆದರೆ ಈ ಹಾಡನ್ನು ನಾನು ನನ್ನ ದೃಷ್ಟಿಕೋನದಲ್ಲಿ ಬರೆದೆ. ಒಂದು ಬಾಟಲ್, ಒಂದು ಉಪ್ಪಿನಕಾಯಿ ಕಟೆಂಟ್ ಇಟ್ಕೊಂಡು ಹಾಡು ಬರೆದೆ. ಒಂದು ಪದ ತೆಗೆದು ಹಿಂದೆ ಹಾಕಬಹುದಿತ್ತು. ಬಾಟಲ್ ನ ಮೇಲೆ ಎತ್ತಿ ಎನ್ನುವ ಪದವನ್ನು ಹಿಂದೆ ಹಾಕಬಹುದಿತ್ತು. ಆದ್ರೆ ನಾನು ಕುತೂಹಲ ಇರಲಿ ಎಂದು ಆ ಪದವನ್ನು ಕೊನೆಯಲ್ಲಿ ಹಾಕಿದೆ ಎಂದು ಹೇಳಿದ್ದಾರೆ.
ಅಂತೆಯೇ, ‘ಸಾಹಿತ್ಯ ರಚಿಸಬೇಕಾದರೆ, ಓರ್ವ ಸಾಹಿತಿ ಎರಡೂ ರೀತಿಯಾಗಿ ಬರೆಯಬಹುದು. ಆದರೆ ನಾನು ಅದನ್ನು ಅಶ್ಲೀಲವಾಗಿಯಾಗಲಿ, ಬೇರೆಯವರ ಭಾವನೆಗಳಿಗೆ ಧಕ್ಕೆ ತರಲಾಗಲಿ.. ತೊಂದರೆ ನೀಡಲಾಗಲಿ ಬರೆಯಲಿಲ್ಲ. ಇವತ್ತಿನರೆಗೂ ನಾನು ಅಂತಹ ಕೆಲಸ ಮಾಡಿಲ್ಲ.. ಸಾಯುವವರೆಗೂ ಮಾಡುವುದೂ ಇಲ್ಲ. ಅದರ ಅವಶ್ಯಕತೆ ಕೂಡ ನನಗಿಲ್ಲ.. ಈ ಹಾಡನ್ನು ಅವರು ಯಾವ ದಿಕ್ಕಿನಲ್ಲಿ ಅರ್ಥೈಸಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಈ ಹಿಂದೆ ಕೂಡ ನಾನು ಯಾವ ಅರ್ಥದಲ್ಲಿ ಬರೆದೆ ಎಂಬುದನ್ನು ಮಾಧ್ಯಮಗಳ ಮುಂದೆಯೂ ಸ್ಪಷ್ಟಪಡಿಸಿದ್ದೇನೆ’ ಎಂದು ಪ್ರೇಮ್ ಹೇಳಿದ್ದಾರೆ.

ಅಂತೆಯೇ, ಕೆಲವರು ಲೈಕ್ ಮತ್ತು ಕಮೆಂಟ್ ಗಳಾಗಿ ತಮ್ಮನ್ನು ನಿಂದಿಸುತ್ತಿದ್ದಾರೆ. ಕೆಲವರಿಗೆ ಅದರಿಂದ ನೋವಾಗಿರಬಹುದು. ಪ್ರೇಮ್ ಈ ತರಹ ಕೂಡ ಬರೆಯುತ್ತಾರೆಯೇ ಎಂದು ಕೇಳಿದ್ದಾರೆ. ಆದರೆ ಓರ್ವ ಸಾಹಿತಿ ಆ ರೀತಿಯೂ ಬರೆಯಬೇಕು.. ಈ ರೀತಿ ಕೂಡ ಬರೆಯಬೇಕು. ಹಾಗೆಂದ ಮಾತ್ರಕ್ಕೆ ಕೀಳುಭಾವನೆ, ಕೀಳು ಮಟ್ಟದ ಸಾಹಿತ್ಯ ಬರೆಯಬಾರದು. ನಾನು ಈ ಹಾಡನ್ನು ಬಾಟಲ್ ಗಮನದಲ್ಲಿರಿಸಿಕೊಂಡು ಬರೆದಿದ್ದೇ ಹೊರತು ಬೇರೇನನ್ನೂ ಅಲ್ಲ. ಆದರೆ ಕೆಲವರು ಬೇರೆ ಬೇರೆ ಅರ್ಥದಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನನ್ನ ಇಡೀ ಕುಟುಂಬವನ್ನು ನಿಂದಿಸುತ್ತಿದ್ದಾರೆ. ಲೈಕ್ ಕಮೆಂಟ್ ಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಆದರೂ ಅವರಿಗೆ ಧನ್ಯವಾದ ಹೇಳುತ್ತೇನೆ. ಕಾಲೆಳೆಯುವುದು.. ಕೀಳಾಗಿ ಮಾತನಾಡುವುದು ಅದು ನಿಮಗೆ ಬಿಟ್ಟಿದ್ದು.. ನಿಮಗೆ ಒಳ್ಳೇದಾಗ್ಲಿ..’ ಎಂದರು.
ಅಲ್ಲದೆ, ‘ನಾನು ಈ ಹಾಡು ಬರೆದಿದ್ದು ಯಾರಿಗೋ ನೋವಾಗಲಿ ಎಂದಲ್ಲ. ಒಂದು ವೇಳೆ ನಿಮಗೆ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ಕ್ಷಮೆ ಕೇಳೋದ್ರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ಇನ್ನೊಬ್ಬರಿಗೆ ನೋವು ಮಾಡಿ ಅದರ ಮೇಲೆ ಜೀವನ ಮಾಡಬೇಕು.. ಕೋಟೆ ಕಟ್ಟಬೇಕು ಅಂತೇನೂ ಇಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.