ಉಡುಪಿ ನವೆಂಬರ್ 12 : ರಾಷ್ಚ್ರೀಯ ಹೆದ್ದಾರಿ 66 ರ ಕಟಪಾಡಿ ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಕಟಪಾಡಿ ಜಂಕ್ಷನ್ನಲ್ಲಿ ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳುವವರೆಗೆ ಸದ್ರಿ ರಾಷ್ಚ್ರೀಯ ಹೆದ್ದಾರಿಯ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಕಂಡಂತೆ ಪರ್ಯಾಯ ಮಾರ್ಗದ ರಸ್ತೆಯ ಮೂಲಕ ವಾಹನ ಸಂಚರಿಸಲು ವ್ಯವಸ್ಥೆ ಮಾಡಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ.

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಘನ ಹಾಗೂ ಇತರೆ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗಧಿಪಡಿಸಿದ ಟ್ರ್ಯಾಕ್ನಲ್ಲಿ ಸಾಗಬೇಕು. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಘನ ಹಾಗೂ ಇತರ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗಧಿಪಡಿಸಿದ ಟ್ರ್ಯಾಕ್ನಲ್ಲಿ ಸಾಗಬೇಕು. ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುವ ಎಕ್ಸ್ಪ್ರೆಸ್ ಹಾಗೂ ಶಟಲ್ ಬಸ್ಗಳು, ಇತರ ಖಾಸಗಿ ವಾಹನಗಳು ಮತ್ತು ಸಾರ್ವಜನಿಕ ವಾಹನಗಳು ಕಲ್ಲಾಪು ಮೂಲಕ ಕಟಪಾಡಿ ಪೇಟೆಗೆ ಬಂದು ಜನರನ್ನು ಇಳಿಸಿ/ ಹತ್ತಿಸಿಕೊಂಡು ಫಾರೆಸ್ಟ್ ಗೇಟ್ ಮೂಲಕ ರಾಷ್ಚ್ರೀಯ ಹೆದ್ದಾರಿ 66 ನ್ನು ಸೇರಬೇಕು. ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು/ ಟ್ರಕ್ಗಳು ಮೂಡುಬೆಳ್ಳೆ-ದೆಂದೂರುಕಟ್ಟೆ-ಅಲೆವೂರು ಮಾರ್ಗವಾಗಿ ಉಡುಪಿಯನ್ನು ಸೇರಿಕೊಳ್ಳಬೇಕು.
ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ದ್ವಿಚಕ್ರ, ತ್ರಿಚಕ್ರ ಮತ್ತು ಲಘು ವಾಹನಗಳು ಉಡುಪಿ-ಮಂಗಳೂರು ಸರ್ವೀಸ್ ರಸ್ತೆಯಲ್ಲಿ ಸಾಗಿ ಮುಂದೆ ರಾಷ್ಚ್ರೀಯ ಹೆದ್ದಾರಿಯ ಮಂಗಳೂರು-ಉಡುಪಿ ರಸ್ತೆ ಸೇರಲು ತೆರೆಯುವ ಮೀಡಿಯನ್ನಲ್ಲಿ ಹೆದ್ದಾರಿ ಪ್ರವೇಶಿಸಿ, ಉಡುಪಿಗೆ ತೆರಳಬೇಕು.
Read This – ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು – ಆರೋಪಿಗಳಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ವಿಸ್ತರಣೆ
ಮಟ್ಟು ಕಡೆಯಿಂದ ಉಡುಪಿ ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕ ಫಾರೆಸ್ಟ್ ಗೇಟ್ ಬಳಿ ತಲುಪಿ ಮಂಗಳೂರು-ಉಡುಪಿ ಹೆದ್ದಾರಿಯನ್ನು ಸೇರಿ ಉಡುಪಿ ಕಡೆಗೆ ತೆರಳಬೇಕು.
ಮಟ್ಟು ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕವಾಗಿ ಫಾರೆಸ್ಟ್ ಗೇಟ್ ಬಳಿ ತಲುಪಿ ಇಲ್ಲಿ ತೆರೆದಿರುವ ಮೀಡಿಯನ್ ಮೂಲಕ ಉಡುಪಿ-ಮಂಗಳೂರು ಹೆದ್ದಾರಿ ಸರ್ವೀಸ್ ರಸ್ತೆಯನ್ನು ಸೇರಿ ಮಂಗಳೂರು ಕಡೆಗೆ ತೆರಳಬೇಕು.
Read this – ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವೆ ನೆರವೇರಿಸಿದ ನಟಿ ನಯನತಾರಾ
ಮಂಗಳೂರು ವಿಮಾನ ನಿಲ್ದಾಣಕ್ಕೆ ತುರ್ತು ಹೋಗುವ ವಾಹನಗಳು ಕಟಪಾಡಿ ಮಾರ್ಗವನ್ನು ಹೊರತುಪಡಿಸಿ ಬೇರೆ ರಸ್ತೆ/ ಮಾರ್ಗದಲ್ಲಿ ಸಾಗುವುದಕ್ಕೆ ಪ್ರಾಶಸ್ತ್ಯ ನೀಡುವುದು. ಕಾಮಗಾರಿ ನಡೆಯುವ ಸ್ಥಳದಿಂದ ಮಂಗಳೂರು ರಸ್ತೆ, ಉಡುಪಿ ರಸ್ತೆ, ಮಟ್ಟು ರಸ್ತೆ ಹಾಗೂ ಶಿರ್ವಾ ರಸ್ತೆಯಲ್ಲಿ 100 ಮೀ. ದೂರದವರೆಗೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.



