LATEST NEWS
ಮಂಗಳೂರು ನಕಲಿ ಹೆಸರಿನಲ್ಲಿ ತಿರುಗುತ್ತಿದ್ದ ಕಾಶ್ಮೀರಿ ವ್ಯಕ್ತಿ ಬಂಧನ
ಮಂಗಳೂರು ನಕಲಿ ಹೆಸರಿನಲ್ಲಿ ತಿರುಗುತ್ತಿದ್ದ ಕಾಶ್ಮೀರಿ ವ್ಯಕ್ತಿ ಬಂಧನ
ಮಂಗಳೂರು ಅಗಸ್ಟ್ 24: ಕಾರಿಗೆ ನಕಲಿ ಬೋರ್ಡ್ ಲಗತ್ತಿಸಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರ ಸೋಗಿನಲ್ಲಿ ಮಂಗಳೂರು ನಗರ ಪ್ರವೇಶಿಸಿದ್ದ ಕಾಶ್ಮೀರಿ ವ್ಯಕ್ತಿ ಸೇರಿದಂತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಶ್ಮೀರದ ಗಂಧರ್ಭಾಲ್ ಜಿಲ್ಲೆಯ ಗಂಜೀಪುರ್ ನಿವಾಸಿ ಶೌಕತ್ ಅಹ್ಮದ್ ಲೋನ್ ಅಲಿಯಾಸ್ ಬಲ್ಜಿತ್ ಷಾ ಮತ್ತು ಆತನ ಚಾಲಕನಾಗಿದ್ದ ಬಲ್ಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಪ್ರಕರಣ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್ ಹರ್ಷ ಬಂಧಿತ ಪ್ರಮುಖ ಆರೋಪಿ ಶೌಕತ್ ಲೋನ್ ತಾನು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಬಲ್ಜಿತ್ ಷಾ ಎಂದು ಗುರುತಿಸಿಕೊಳ್ಳುತ್ತಿದ್ದ. ಕೆಲಸಕೊಡಿಸುವ ಹೆಸರಿನಲ್ಲಿ ಹಲವು ರಾಜ್ಯಗಳಲ್ಲಿ ಯುವಜನರಿಗೆ ವಂಚಿಸಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳ ಮೂಲಕ ಹಲವು ಯುವತಿಯರಿಗೆ ವಂಚಿಸಿದ್ದಾನೆ ಎಂದು ತಿಳಿಸಿದರು.
ಆರೋಪಿಗಳು ಮಂಗಳೂರಿಗೆ ಬರುವ ಮುನ್ನ ಗೋವಾ, ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೆ ದೇಶದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಓಡಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಆಗಸ್ಟ್ 16ರಂದು ಮಂಗಳೂರಿಗೆ ಬಂದಿದ್ದ ಇಬ್ಬರೂ ಇಲ್ಲಿಯೂ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಓಡಾಡಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಆರೋಪಿಗಳಿಂದ ಕೆಲವು ಸೂಕ್ಷ್ಮ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಆರೋಪಿಗಳ ಬಂಧನದ ಕುರಿತು ಕೇಂದ್ರಿಯ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದ್ದು ಅವರಿಂದಲೂ ತನಿಖೆಗೆ ನೆರವು ಪಡೆಯಲಾಗುತ್ತಿದೆ ಎಂದು ಹೇಳಿದರು.
You must be logged in to post a comment Login