ಪಣಜಿ ಜೂನ್ 25: ಗೋವಾದ ಅತ್ಯಂತ ಜನಪ್ರಿಯ ಪ್ರವಾಸಿ ಕಡಲತೀರವಾದ ಬಾಗಾ ಬೀಚ್ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕಡಲತೀರದ ಬಂಡೆಯೊಂದರ ಮೇಲೆ ಕುಳಿತಿದ್ದ ವೇಳೆ ಏಕಾಏಕಿ ಅಪ್ಪಳಿಸಿದ ಸಮುದ್ರದ ಪ್ರಬಲ ಅಲೆಗಳಿಗೆ ಸಿಲುಕಿ ಕರ್ನಾಟಕದ ಪ್ರವಾಸಿಯೊಬ್ಬರು ಜಲಸಮಾಧಿಯಾಗಿದ್ದಾರೆ . ಮೃತರನ್ನು ಕರ್ನಾಟಕದ ವಿಜಯಪುರ ಜಿಲ್ಲೆಯ ನಿವಾಸಿ ಸಾಹಸ್ ಅಶ್ಪಾಕ್ ಮಸಾಲಿ ಎಂದು ಗುರುತಿಸಲಾಗಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಸಮುದ್ರ ತೀವ್ರ ಪ್ರಕ್ಷುಬ್ಧಗೊಂಡಿದ್ದರೂ, ಸಾಹಸ್ ಅವರು ಅಪಾಯಕಾರಿ ಬಂಡೆಗಳ ಮೇಲೆ ಕುಳಿತುಕೊಂಡಿದ್ದರು ಎನ್ನಲಾಗಿದೆ.

ಸಾಹಸ್ ಅವರು ಬಂಡೆಯ ಮೇಲೆ ಕುಳಿತಿದ್ದಾಗ ಸಮುದ್ರದ ಅಲೆಯೊಂದು ಭೀಕರವಾಗಿ ಅಪ್ಪಳಿಸಿದೆ. ಅಲೆಯ ರಭಸಕ್ಕೆ ಸಿಲುಕಿದ ಅವರು ಕ್ಷಣಾರ್ಧದಲ್ಲಿ ಸಮುದ್ರದ ನೀರಿನೊಳಗೆ ಕೊಚ್ಚಿಹೋಗಿದ್ದಾರೆ. ಮುಂಗಾರು ಅವಧಿಯಾಗಿರುವುದರಿಂದ ಸಮುದ್ರದಲ್ಲಿ ತೀವ್ರ ಪ್ರವಾಹ ಹಾಗೂ ಅಲೆಗಳ ಅಬ್ಬರ ಜೋರಾಗಿತ್ತು. ಹೀಗಾಗಿ ತಕ್ಷಣವೇ ಅವರನ್ನು ರಕ್ಷಿಸಲು ಸ್ಥಳೀಯರಿಗಾಗಲಿ ಅಥವಾ ಪ್ರತ್ಯಕ್ಷದರ್ಶಿಗಳಿಗಾಗಲಿ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸುತ್ತಿದ್ದಂತೆ ಕೋಸ್ಟ್ಗಾರ್ಡ್ ಮತ್ತು ರಕ್ಷಣಾ ತಂಡಗಳು ಜಂಟಿಯಾಗಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದವು. ಹಲವು ಗಂಟೆಗಳ ಕಾಲ ನಡೆಸಿದ ನಿರಂತರ ಹುಡುಕಾಟದ ಬಳಿಕ, ಕಡಲತೀರದ ಸ್ವಲ್ಪ ದೂರದಲ್ಲಿ ಸಾಹಸ್ ಅವರ ಮೃತದೇಹ ಪತ್ತೆಯಾಗಿದ್ದು, ಅದನ್ನು ಹೊರತೆಗೆಯಲಾಗಿದೆ. ಇನ್ನು ಸಾಹಸ್ ಅವರು ಅಲೆಗಳ ಭೋರ್ಗರೆತಕ್ಕೆ ಕೊಚ್ಚಿಹೋಗುವ ಲೈವ್ ದೃಶ್ಯದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮುಂಗಾರು ಅವಧಿಯಲ್ಲಿ ಸಮುದ್ರದ ವಾತಾವರಣ ಪ್ರತಿಕೂಲವಾಗಿರುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ಹೈ ಟೈಡ್ (ಹೆಚ್ಚಿನ ಉಬ್ಬರ) ಉಂಟಾಗಿ ಪ್ರಬಲ ಅಲೆಗಳು ಅಪ್ಪಳಿಸುವುದರಿಂದ ಕರಾವಳಿಯ ಬಂಡೆಗಳು ಅತ್ಯಂತ ಅಪಾಯಕಾರಿಯಾಗಿವೆ. ಪ್ರವಾಸಿಗರು ಇಂತಹ ಜಾಗಗಳಿಂದ ದೂರವಿರಬೇಕು ಮತ್ತು ಸಮುದ್ರಕ್ಕೆ ಇಳಿಯಬಾರದು ಎಂದು ಅಧಿಕಾರಿಗಳು ಪದೇ ಪದೇ ವಿನಂತಿಸುತ್ತಿದ್ದಾರೆ. ಆದಾಗ್ಯೂ ಪ್ರವಾಸಿಗರ ಬೇಜವಾಬ್ದಾರಿತನದಿಂದ ಇಂತಹ ಸರಣಿ ದುರಂತಗಳು ಸಂಭವಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.