ಬೆಂಗಳೂರು ಎಪ್ರಿಲ್ 02: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತು ಎಐ ತಂತ್ರಜ್ಞಾನ ಬಳಸಿ ಕಾಲ್ಪನಿಕ ಹಾಗೂ ಪ್ರಚೋದನಾಕಾರಿ ವಿಡಿಯೋ ಸಿದ್ಧಪಡಿಸಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಎಂಡಿ ಸಮೀರ್ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಮೀರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ತನಿಖೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಬುಧವಾರ ತಡೆ ನೀಡಿದೆ.

ವಿಚಾರಣೆ ವೇಳೆ ಸಮೀರ್ ಪರ ವಕೀಲರು, “ಕೇವಲ ಯೂಟ್ಯೂಬ್ ವಿಡಿಯೋ ಹಾಕಿದ್ದಕ್ಕೆ ಪೊಲೀಸರು ಸಾರ್ವಜನಿಕ ಶಾಂತಿ ಭಂಗದ ನೆಪದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ” ಎಂದು ವಾದಿಸಿದರು. ಆದರೆ, ಸರ್ಕಾರದ ಪರ ಅಭಿಯೋಜಕಿ ಅಸ್ಮಾ ಕೌಸರ್ ಇದನ್ನು ಬಲವಾಗಿ ವಿರೋಧಿಸಿದರು. “ಸಮೀರ್ ಎಐ ತಂತ್ರಜ್ಞಾನ ಬಳಸಿ ಶವಗಳನ್ನು ಹೂಳಲಾಗಿದೆ ಎಂಬಂತಹ ಸುಳ್ಳು ದೃಶ್ಯಗಳನ್ನು ಸೃಷ್ಟಿಸಿ ದ್ವೇಷ ಹರಡುತ್ತಿದ್ದಾರೆ. ಈತನ ವಿರುದ್ಧ ಈಗಾಗಲೇ ಐದು ಪ್ರಕರಣಗಳಿದ್ದು, ಇದು ಜನರನ್ನು ಹಾದಿ ತಪ್ಪಿಸುವ ಸಂಚು” ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಸಮೀರ್ ತನ್ನ ‘ದೂತ’ ಯೂಟ್ಯೂಬ್ ಚಾನಲ್ನಲ್ಲಿ, “ಸಾವಿರಾರು ಜನರನ್ನು ರೇಪ್ ಮಾಡಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ” ಎಂದು ಪ್ರಚೋದನಾಕಾರಿ ವಿಡಿಯೋ ಅಪ್ಲೋಡ್ ಮಾಡಿದ್ದನು. ಈ ಸಂಬಂಧ 2025ರ ಜುಲೈನಲ್ಲಿ ಬಿಎನ್ಎಸ್ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಾಗಿತ್ತು. ಸದ್ಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ.