ಕಾರ್ಕಳ ಜೂನ್ 29: ಕಾರ್ಕಳ ಬಸ್ ನಿಲ್ದಾಣದ ಸಮೀಪದ ರಿಕ್ಷಾ ನಿಲ್ದಾಣದ ಎದುರು ನಿರ್ಮಾಣವಾಗಿರುವ ಬೃಹತ್ ರಸ್ತೆ ಗುಂಡಿಗೆ ಸೋಮವಾರ (ಜೂನ್ 29) ಸ್ಥಳೀಯರು ಹಾಗೂ ವಾಹನ ಸವಾರರು ಬಾಳೆಗಿಡ ನೆಡುವ ಮೂಲಕ ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೈಪ್ಲೈನ್ ಅಳವಡಿಕೆಗಾಗಿ ರಸ್ತೆ ಅಗೆದು, ಕಾಮಗಾರಿ ಮುಗಿದ ನಂತರ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ನಿರ್ಲಕ್ಷ್ಯ ವಹಿಸಿದ್ದೇ ಈ ಅಪಾಯಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಈ ಭಾಗದಲ್ಲಿ ಪೈಪ್ಲೈನ್ ಕಾಮಗಾರಿ ನಡೆದಿತ್ತು. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಂಡಿಯನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟಿದ್ದರು. ಪ್ರಸ್ತುತ ಮುಂಗಾರು ಮಳೆ ತೀವ್ರಗೊಂಡಿರುವುದರಿಂದ ರಸ್ತೆಯ ಆ ಭಾಗವು ಸಂಪೂರ್ಣವಾಗಿ ಜರಿದು ದೊಡ್ಡ ಕಂದಕವಾಗಿ ಮಾರ್ಪಟ್ಟಿದೆ. ಮಳೆಯ ನೀರು ಈ ಗುಂಡಿಯಲ್ಲಿ ತುಂಬಿಕೊಳ್ಳುತ್ತಿರುವುದರಿಂದ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ದಿನನಿತ್ಯ ಬಿದ್ದು ಅಪಘಾತಕ್ಕೊಳಗಾಗುತ್ತಿದ್ದಾರೆ.
ಈ ರಸ್ತೆಯು ಕಾರ್ಕಳದ ಮುಖ್ಯ ಕೇಂದ್ರ ಭಾಗದಲ್ಲಿದ್ದು, ನಿತ್ಯ ಸಾವಿರಾರು ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ರಿಕ್ಷಾ ನಿಲ್ದಾಣದ ತೀರಾ ಎದುರೇ ಈ ಡೆತ್ ಟ್ರ್ಯಾಪ್ ಇರುವುದರಿಂದ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ದಿನನಿತ್ಯ ಪ್ರಾಣಭಯದಲ್ಲೇ ಓಡಾಡುವಂತಾಗಿದೆ. ಅಧಿಕಾರಿಗಳ ಕಣ್ಣು ತೆರೆಸಲು ಸ್ಥಳೀಯರು ರಸ್ತೆ ಮಧ್ಯದ ಗುಂಡಿಯೊಳಗೆ ಬಾಳೆಗಿಡ ನೆಟ್ಟು ಪ್ರತಿಭಟಿಸಿದರು.
ತತ್ಕ್ಷಣವೇ ಪುರಸಭೆ ಆಡಳಿತ ಎಚ್ಚೆತ್ತುಕೊಂಡು ಈ ರಸ್ತೆಯನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.