ಹೊಸನಗರ ಜೂನ್ 27: ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಾ.ಮ. ಹರೀಶ್ ಅವರ ಪುತ್ರ ಉಲ್ಲಾಸ್ (28) ಅವರು ಶನಿವಾರ ಬೆಳಿಗ್ಗೆ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ (ಚಾರಣ) ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.

ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೊಬ್ಬ ಚಾರಣದ ವೇಳೆ ಕಣ್ಣು ಮುಚ್ಚಿರುವುದು ಇಡೀ ಕುಟುಂಬ ಹಾಗೂ ಚಿತ್ರರಂಗವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಉಲ್ಲಾಸ್ ಅವರು ಬೆಂಗಳೂರಿನ ‘ಚಾರಣ’ ಎಂಬ ಪ್ರವಾಸಿ ಸಂಸ್ಥೆಯ ಪ್ಯಾಕೇಜ್ ಟೂರ್ ಮೂಲಕ ತಮ್ಮ ಕುಟುಂಬದ ಆಪ್ತ ಸ್ನೇಹಿತ ಸುರೇಶ್ ಅವರೊಂದಿಗೆ ಶನಿವಾರ ಬೆಳಿಗ್ಗೆ 6.30ರ ಸುಮಾರಿಗೆ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ್ದರು. ಬೆಟ್ಟದ ಮೇಲಿರುವ ಪವಿತ್ರ ಸರ್ವಜ್ಞ ಪೀಠವನ್ನು ಸಂದರ್ಶಿಸಿ ವಾಪಸ್ಸಾಗುವಾಗ, ಪ್ರವಾಸಿ ಮಂದಿರದ ಮುಂಭಾಗದ ದೇವಸ್ಥಾನದ ಸಮೀಪ ಉಲ್ಲಾಸ್ ಅವರಿಗೆ ತೀವ್ರವಾಗಿ ಹೃದಯಾಘಾತ ಸಂಭವಿಸಿದೆ. ಅವರು ಸ್ಥಳದಲ್ಲೇ ಹಠತ್ತಾಗಿ ಕುಸಿದು ಬಿದ್ದಿದ್ದಾರೆ.
ಉಲ್ಲಾಸ್ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದ ಸಹಚರರು ಹಾಗೂ ಸಹ ಪ್ರವಾಸಿಗರು ತಕ್ಷಣವೇ ಪ್ರಾಥಮಿಕ ಚಿಕಿತ್ಸೆಯಾಗಿ ಕೃತಕ ಉಸಿರಾಟ (CPR) ನೀಡಿದ್ದಾರೆ. ತದನಂತರ ಜೀಪ್ ಹಾಗೂ ಅಂಬ್ಯುಲೆನ್ಸ್ ಮೂಲಕ ನಗರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಲ್ಲಾಸ್ ಕೊನೆಯುಸಿರೆಳೆದಿದ್ದಾರೆ.
ಮೃತ ಉಲ್ಲಾಸ್ ಅವರಿಗೆ ಇತ್ತೀಚೆಗಷ್ಟೇ ಅತ್ಯಂತ ಸರಳವಾಗಿ ವಿವಾಹ ನಿಶ್ಚಿತಾರ್ಥ (Engagement) ಕಾರ್ಯಕ್ರಮ ನಡೆದಿತ್ತು. ಮುಂಬರುವ ಡಿಸೆಂಬರ್ ತಿಂಗಳಲ್ಲಿ ಮದುವೆ ನಡೆಸಲು ಎರಡು ಕುಟುಂಬಗಳು ದಿನಾಂಕವನ್ನೂ ನಿಗದಿಪಡಿಸಿದ್ದವು. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಮಗನ ಸಾವಿನ ಸುದ್ದಿ ಕೇಳಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.