ಮಂಗಳೂರು, ಜನವರಿ 3 : ಮಂಗಳೂರು ಕಂಬಳದಲ್ಲಿ ಕಂಬಳದ ಹಿರಿಯ ತೀರ್ಪುಗಾರ ಕಂಬಳದ ಭೀಷ್ಮ ಗುಣಪಾಲ ಕಡಂಬ ಅವರಿಗೆ ಅವಮಾನ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಕಾರ್ಕಳದ ಮಿಯ್ಯಾರು ಕಂಬಳದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತು ಅವಮಾನ ಮಾಡಿದ್ದಾರೆ ಎನ್ನಲಾದ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಬಹಿರಂಗ ವೇದಿಕೆಯಲ್ಲಿ ಕ್ಷಮೆ ಯಾಚನೆ ಮಾಡಿದ್ದಾರೆ.


ಮಂಗಳೂರು ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನಿಸಿದ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋದ ವ್ಯಕ್ತವಾಗಿತ್ತು, ಅಲ್ಲದೆ ಗುಣಪಾಲ ಕಡಂಬರ ಅಭಿಮಾನಿಗಳು ಎಂಬ ಹೆಸರಲ್ಲಿ ಪ್ರತ್ಯೇಕ ಗ್ರೂಪ್ ರಚಿಸಿಕೊಂಡು ಅವಮಾನಿಸಿದ ಮುಚ್ಚೂರು ಲೋಕೇಶ್ ಶೆಟ್ಟಿ ಮತ್ತು ಅರುಣ್ ಶೆಟ್ಟಿ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಲಾಗಿತ್ತು. ಈ ನಡುವೆ, ಗುಣಪಾಲ ಕಡಂಬರು ಕಂಬಳದ ಕಾಮೆಂಟರಿ ಮಾಡುತ್ತಿದ್ದಾಗಲೇ ಅರುಣ್ ಶೆಟ್ಟಿ ಎಂಬವರು ಎದುರು ಮಾತನಾಡಿದ್ದರ ಆಡಿಯೋ ಕೂಡ ವೈರಲ್ ಆಗಿತ್ತು. ಕಂಬಳ ಸಮಿತಿಯ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿ, ಗುಣಪಾಲ ಕಡಂಬರನ್ನು ಏಕವಚನದಲ್ಲಿ ನಿಂದಿಸಿದ್ದಾರೆಂದು ಹೇಳಲಾಗಿತ್ತು.


ಇದೀಗ ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷರೂ, ದಕ್ಷಿಣ ಕನ್ನಡ ಸಂಸದರೂ ಆಗಿರುವ ಕ್ಯಾ. ಬ್ರಿಜೇಶ್ ಚೌಟ ಮತ್ತು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಎರಡೂ ಕಡೆಯವರನ್ನು ಗುಣಪಾಲ ಕಡಂಬರ ಬಳಿಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ‌ಅಲ್ಲದೆ, ವಿವಾದ ಮುಂದುವರಿಸದೆ ಇಲ್ಲಿಗೆ ಮುಗಿಸುವಂತೆ ಕೇಳಿಕೊಂಡಿದ್ದಾರೆ. ಮೂಡುಬಿದ್ರೆಯಲ್ಲಿ ಮಾತುಕತೆ ನಡೆದ ಬೆನ್ನಲ್ಲೇ ಕಾರ್ಕಳದ ಮಿಯ್ಯಾರಿನಲ್ಲಿ ನಡೆಯುತ್ತಿದ್ದ ಕಂಬಳದ ವೇದಿಕೆಯಲ್ಲೇ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತು ಲೋಕೇಶ್ ಶೆಟ್ಟಿ ಮುಚ್ಚೂರು ಬಹಿರಂಗ ಕ್ಷಮೆ ಯಾಚಿಸಿದ್ದಾರೆ.


ಗುಣಪಾಲ ಕಡಂಬರು ನಮಗೆಲ್ಲ ಗುರು ಸಮಾನರು. ನಾವೆಲ್ಲರೂ ಅವರ ಅಭಿಮಾನಿಗಳೇ. ಮಂಗಳೂರು ಕಂಬಳದಲ್ಲಿ ಆಗಿರುವ ಪ್ರಮಾದಕ್ಕೆ ಎಲ್ಲ ಕಂಬಳ ಕೋಣಗಳ ಮಾಲೀಕರು ಮತ್ತು ಕಂಬಳ ಸಮಿತಿಯ ಪರವಾಗಿ ಕ್ಷಮೆ ಕೇಳುತ್ತೇನೆ. ಮುಂದೆ ಯಾವತ್ತೂ ಕಂಬಳದ ತೀರ್ಪುಗಾರರಿಗಾಗಲೀ, ಕಂಬಳದಲ್ಲಿ ಕೆಲಸ ಮಾಡುವವರಿಗಾಗಲೀ ಯಾವುದೇ ರೀತಿಯ ಚ್ಯುತಿ ಬರಬಾರದು.‌ ಅವಮಾನಿಸುವ ಘಟನೆ ಆಗಬಾರದು. ಈ ವಿವಾದ ಇಲ್ಲಿಗೇ ಮುಕ್ತಾಯ ಆಗಬೇಕು ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ ಕೇಳಿಕೊಂಡರು.

ಆಬಳಿಕ ಮಾತನಾಡಿದ ಮುಚ್ಚೂರು ಲೋಕೇಶ್ ಶೆಟ್ಟಿ, ಕಳೆದ ಬಾರಿಯ ಕಂಬಳದಲ್ಲಿ ಏನೋ ಅಚಾತುರ್ಯದಿಂದ ಪ್ರಮಾದ ಆಗಿದೆ, ಗುಣಪಾಲ ಕಡಂಬರು ಹಿಂದೆಯೂ ನಮಗೆ ಗುರುಗಳಾಗಿದ್ದವರು. ಮುಂದೆಯೂ ಅವರ ಆಶೀರ್ವಾದ ಬೇಕು. ಅವರಿಗೆ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕು ಮೊದಲು ಸಂಸದ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ಕೊಳಚ್ಚೂರು ಸುಕುಮಾರ ಶೆಟ್ಟಿ ಸೇರಿದಂತೆ ಹಲವ ಕಂಬಳ ಕೋಣಗಳ ಮಾಲೀಕರು, ಕಂಬಳ ಸಮಿತಿಯ ಪ್ರಮುಖರು ಸೇರಿದ್ದರು.

Share Information