ಪುತ್ತೂರು ಅಕ್ಟೋಬರ್ 29: ದ್ವೇಷ ಭಾಷಣ ಮಾಡಿದ ಆರೋಪದಡಿ ದೂರು ದಾಖಲಿಸಿಕೊಂಡಿದ್ದ RSS ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗೆ ಮತ್ತೆ ರಿಲೀಫ್ ದೊರೆತಿದೆ. ನ್ಯಾಯಾಲಯ ಈ ಹಿಂದೆ ನೀಡಿದ ಬಲವಂತದ ಬಂಧನ ಆದೇಶವನ್ನು ಕಾಯ್ದಿರಿಸಿದ್ದು, ನವೆಂಬರ್ 4 ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಳಿಗೆ ಎಂಬಲ್ಲಿ ಅಕ್ಟೋಬರ್ 20 ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಲ್ಲದೆ, ಸಮಾಜದಲ್ಲಿ ಧರ್ಮ-ಧರ್ಮಗಳ ಮಧ್ಯೆ ಧ್ವೇಷ ಮೂಡಿಸುವ ಕೆಲಸ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಿಪಿಐಎಂ ಮುಖಂಡೆ ಈಶ್ವರಿ ಪದ್ಮುಂಜ ಎಂಬವರು ಈ ದೂರನ್ನು ದಾಖಲಿಸಿದ್ದು, ಪೋಲೀಸರು ಬಿಎನ್ಎಸ್ 79, 196,290, 302 ಮತ್ತು 3(5) ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಭಾಕರ ಭಟ್ ವಿರುದ್ಧ ಈ ಹಿಂದೆಯೂ ಹಲವು ಬಾರಿ ದೂರು ದಾಖಲಿಸಿ ಅವರನ್ನು ಬಂಧಿಸುವ ಪ್ರಯತ್ನಗಳು ನಡೆಸಿದ್ದರೂ, ಪ್ರತಿಬಾರಿ ನ್ಯಾಯಾಲಯದ ಮೊರೆ ಹೋಗಿ ಬಂಧನದಿಂದ ತಪ್ಪಿಸಿಕೊಂಡಿದ್ದರು. ಬಹುತೇಕ ಎಲ್ಲಾ ಪ್ರಕರಣದಲ್ಲೂ ಪೋಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಬಾರಿ ಸಿಪಿಐಎಂ ಮುಖಂಡೆ ದೂರು ದಾಖಲಿಸಿರುವ ಹಿನ್ನಲೆಯಲ್ಲಿ ಇದೊಂದು ದ್ವೇಷಪೂರಿತ ದೂರು ಎಂದು ಪ್ರಭಾಕರ ಭಟ್ ವಕೀಲರು ನ್ಯಾಯಾಲಯದ ಮುಂದೆ ತಿಳಿಸಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ಗ್ರಾಮಾಂತರ ಪೋಲೀಸರು ಪ್ರಭಾಕರ್ ಭಟ್ ಗೆ ನೋಟೀಸ್ ಜಾರಿ ಮಾಡಿದ್ದು ಅಕ್ಟೋಬರ್ 30 ರಂದು ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪುತ್ತೂರು ಐದನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯ ಪ್ರಭಾಕರ ಭಟ್ ಅರ್ಜಿಯನ್ನು ಪರಸ್ಕರಿಸಿ ಪೋಲೀಸರಿಗೆ ಬಲವಂತದ ಬಂಧನ ನಡೆಸದಂತೆ ಸೂಚಿಸಿತ್ತಲ್ಲದೆ, ನಿರೀಕ್ಷಣಾ ಜಾಮೀನಿನ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು. ಅಲ್ಲದೆ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪ್ರೋಸಿಕ್ಯೂಷನ್ ಗೆ ಅವಕಾಶ ನೀಡಿತ್ತು. ಇಂದು ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯದ ಮುಂದೆ ಪ್ರೋಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸುವ ಜೊತೆಗೆ ದೂರುದಾರೆಯ ಪರವಾಗಿ ವಕೀಲರು ಹಾಜರಾಗಿ ಜಾಮೀನು ನೀಡಬಾರದಂತೆ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ.
ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ನವಂಬರ್ 4 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈ ನಡುವೆ ಪ್ರಭಾಕರ್ ಭಟ್ ಗೆ ಪೋಲೀಸ್ ಠಾಣೆಗೆ ಹಾಜರಾಗಲು ನಾಳೆ ಸಮಯ ನಿಗದಿಪಡಿಸಲಾಗಿದ್ದು, ಅವರು ಪೋಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸುತ್ತೋರೋ ಅನ್ನೋದನ್ನ ಕಾದು ನೋಡಬೇಕಿದೆ.