ಬಂಟ್ವಾಳ, ಮಾರ್ಚ್ 17: ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ ಮಾರ್ಚ್ 20ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ತಿಳಿಸಿದ್ದಾರೆ.

ಮಂಗಳವಾರ ಬಿಸಿರೋಡಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವಸಾಹತು ಮನೋಭಾವದಿಂದ ಭಾರತೀಯತೆ ನಡೆಗೆ – ಒಂದು ಚಿಂತನೆ” ಎಂಬ ಮಹತ್ವದ ವಿಷಯದ ಕುರಿತು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಲ್ಲಡ್ಕದ ಆಜಾದ್ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಟಿವಿ9 ಕನ್ನಡ ವಾಹಿನಿಯ ಸಂಪಾದಕ ಹಾಗೂ ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ಉದ್ಘಾಟಿಸಲಿದ್ದಾರೆ. ಶ್ರೀ ರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ ವಿಷಯ ತಜ್ಞರಿಂದ ಒಟ್ಟು ನಾಲ್ಕು ಗೋಷ್ಠಿಗಳು ನಡೆಯಲಿವೆ:
-
ಪ್ರಥಮ ಗೋಷ್ಠಿ: “ಭಾಷೆ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೊಂದು ಇಣುಕುನೋಟ” – ವಿಷಯ ಮಂಡನೆ: ಡಾ. ಆರತಿ ವಿ.ಬಿ. (ಪ್ರಾಧ್ಯಾಪಕಿ).
-
ದ್ವಿತೀಯ ಗೋಷ್ಠಿ: “ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ವಸಾಹತುಭಾವದಿಂದ ಮುಕ್ತವಾಗುವತ್ತ” – ವಿಷಯ ಮಂಡನೆ: ರಾಜೀವ ಕುಡಚಿ (ಮಾಜಿ ಶಾಸಕರು).
-
ತೃತೀಯ ಗೋಷ್ಠಿ: “ಶಿಕ್ಷಣ ಮತ್ತು ಇತಿಹಾಸದ ಮೇಲೊಂದು ಚರ್ಚೆ” – ವಿಷಯ ಮಂಡನೆ: ರೋಹಿತ್ ಚಕ್ರತೀರ್ಥ (ಚಿಂತಕರು).
-
ಸಮಾರೋಪ ಗೋಷ್ಠಿ: ಮುಕ್ತ ಚಿಂತನೆ ಮತ್ತು ಸಮಾರೋಪ ಭಾಷಣ – ರಘುನಂದನ್ (ಅಖಿಲ ಭಾರತೀಯ ಟೋಳಿ ಸದಸ್ಯರು).
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಹಾಗೂ ಸಂಸ್ಥೆಯ ಸಂಚಾಲಕಿ ಲಕ್ಷ್ಮೀ ರಘುರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.