ಜೈಪುರ ಜುಲೈ 07: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಂಗಳವಾರ ಮುಂಜಾನೆ ಅತ್ಯಂತ ಕರಳು ಹಿಂಡುವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿವೇಗವಾಗಿ ಬಂದ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಫುಟ್ಪಾತ್ ಮೇಲೆ ಕುಳಿತಿದ್ದ ಕುಟುಂಬದ ಮೇಲೆ ಹರಿದ ಪರಿಣಾಮ, ತಂದೆ ಹಾಗೂ ಅವರ ಮೂವರು ಅಪ್ರಾಪ್ತ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಮಕ್ಕಳ ದೇಹಗಳು ರಸ್ತೆಯುದ್ದಕ್ಕೂ ಛಿದ್ರ ಛಿದ್ರಗೊಂಡಿವೆ.

ಮೃತರನ್ನು ಚಂದ್ರಪ್ರಕಾಶ್ ಮತ್ತು ಅವರ ಪುತ್ರರಾದ ರಮೇಶ್ (11), ರತನ್ (10) ಹಾಗೂ ದೀಪಕ್ (8) ಎಂದು ಗುರುತಿಸಲಾಗಿದೆ. ಚಂದ್ರಪ್ರಕಾಶ್ ಅವರ ಪತ್ನಿ ಕೈಲಾಶಿ ದೇವಿಗೆ ಭೀಕರ ಗಾಯಗಳಾಗಿದ್ದು, ಅವರನ್ನು ಜೈಪುರದ ಪ್ರಸಿದ್ಧ ಎಸ್ಎಂಎಸ್ (SMS) ಆಸ್ಪತ್ರೆಯ ಟ್ರಾಮಾ ಸೆಂಟರ್ಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಶ್ಯಾಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 200 ಅಡಿ ಬೈಪಾಸ್ನಲ್ಲಿರುವ ಕಮಲಾ ನೆಹರು ನಗರದಲ್ಲಿ ಈ ದುರಂತ ಸಂಭವಿಸಿದೆ. ಚಂದ್ರಪ್ರಕಾಶ್ ಅವರು ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಜೈತ್ಪುರಕ್ಕೆ ತೆರಳಲು ವಾಹನಕ್ಕಾಗಿ ಫುಟ್ಪಾತ್ ಮೇಲೆ ಕುಳಿತು ಕಾಯುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗ ಹಾಗೂ ಬೇಜವಾಬ್ದಾರಿಯಿಂದ ಬಂದ ಟ್ರೇಲರ್ (ಟಿಪ್ಪರ್) ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಫುಟ್ಪಾತ್ಗೆ ನುಗ್ಗಿ ಐವರ ಮೇಲೂ ಚಲಿಸಿದೆ.
ಅಪಘಾತದ ಬೆನ್ನಲ್ಲೇ ಟಿಪ್ಪರ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಶ್ಯಾಮ್ ನಗರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪರಾರಿಯಾದ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.