ಕಾಂಡ್ಲಾ/ಅಹಮದಾಬಾದ್ , ಮಾರ್ಚ್ 27:ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ರಾಜತಾಂತ್ರಿಕ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಎದುರಾಗಿರುವ ಯುದ್ಧದ ಭೀತಿಯ ನಡುವೆಯೇ, ಭಾರತದ ಇಂಧನ ಭದ್ರತೆಗೆ ಮಹತ್ವದ ಬಲ ಲಭಿಸಿದೆ. ಸುಮಾರು 47,600 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಹೊತ್ತ ಬೃಹತ್ ಸರಕು ನೌಕೆ ‘ಜಗ್ ವಸಂತ್’ (Jag Vasant) ಶುಕ್ರವಾರ ಯಶಸ್ವಿಯಾಗಿ ಗುಜರಾತ್ನ ಕಾಂಡ್ಲಾ ಬಂದರಿಗೆ ಬಂದು ತಲುಪಿದೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಸಾಗಾಟ ಮಾರ್ಗಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಇಂತಹ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಕಣ್ಗಾವಲು ಹಾಗೂ ಕೇಂದ್ರ ಸರ್ಕಾರದ ವ್ಯವಸ್ಥಿತ ರಾಜತಾಂತ್ರಿಕ ಸಂವಹನದಿಂದಾಗಿ ಈ ಹಡಗು ಸುರಕ್ಷಿತವಾಗಿ ಭಾರತದ ಕರಾವಳಿ ತಲುಪಿದೆ. ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ಸಂಚರಿಸುವಾಗ ಹಡಗು ತನ್ನ ಗುರುತನ್ನು (Broadcasting Identity) ಸ್ಪಷ್ಟವಾಗಿ ಪ್ರದರ್ಶಿಸಿದ ಕಾರಣ ಯಾವುದೇ ಅಡೆತಡೆಯಿಲ್ಲದೆ ಬಂದರು ಪ್ರವೇಶಿಸಲು ಸಾಧ್ಯವಾಯಿತು.
ದೇಶದಾದ್ಯಂತ ಅಡುಗೆ ಅನಿಲದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಷ್ಟು ಬೃಹತ್ ಪ್ರಮಾಣದ ಎಲ್ಪಿಜಿ ಆಮದು ಮಾಡಿಕೊಂಡಿರುವುದು ಮಾರುಕಟ್ಟೆಯಲ್ಲಿ ಅನಿಲದ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ. ಕಾಂಡ್ಲಾ ಬಂದರಿನಲ್ಲಿ ಈಗಾಗಲೇ ಅನ್ಲೋಡ್ ಪ್ರಕ್ರಿಯೆ ಆರಂಭವಾಗಿದ್ದು, ಪೈಪ್ಲೈನ್ಗಳ ಮೂಲಕ ಸಂಗ್ರಹಣಾ ಘಟಕಗಳಿಗೆ ಅನಿಲವನ್ನು ವರ್ಗಾಯಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಇಂಧನ ಅಗತ್ಯತೆ ಪೂರೈಸಲು ‘ಪೈನ್ ಗ್ಯಾಸ್’ (Pine Gas) ಎಂಬ ಮತ್ತೊಂದು ನೌಕೆಯು 45,000 ಮೆಟ್ರಿಕ್ ಟನ್ ಎಲ್ಪಿಜಿಯೊಂದಿಗೆ ಶೀಘ್ರದಲ್ಲೇ ನವ ಮಂಗಳೂರು ಬಂದರಿಗೆ (NMP) ತಲುಪುವ ನಿರೀಕ್ಷೆಯಿದೆ. ಈ ಮೂಲಕ ದೇಶದ ಎರಡು ಪ್ರಮುಖ ದಿಕ್ಕುಗಳಿಂದ ಇಂಧನ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.