ಟೆಹ್ರಾನ್,ಮಾರ್ಚ್ 30 ಕುವೈತ್ನ ಆಯಕಟ್ಟಿನ ಪ್ರದೇಶದಲ್ಲಿರುವ ಪ್ರಮುಖ ವಿದ್ಯುತ್ ಮತ್ತು ನೀರು ಶುದ್ಧೀಕರಣ ಸ್ಥಾವರದ ಮೇಲೆ ಇರಾನ್ ಪಡೆಗಳು ಭಾನುವಾರ ತಡರಾತ್ರಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದಾಳಿಯಿಂದಾಗಿ ಸ್ಥಾವರದ ಮೂಲಸೌಕರ್ಯಕ್ಕೆ ತೀವ್ರ ಹಾನಿಯಾಗಿದ್ದು, ಇಡೀ ಕೊಲ್ಲಿ ವಲಯದಲ್ಲಿ ಯುದ್ಧದ ಭೀತಿ ಆವರಿಸಿದೆ.

ಕುವೈತ್ನ ಇಂಧನ ಭದ್ರತೆಯ ಬೆನ್ನೆಲುಬಾಗಿರುವ ಈ ಸ್ಥಾವರವನ್ನು ಗುರಿಯಾಗಿಸಿಕೊಂಡು ಇರಾನ್ ಹಲವಾರು ಕ್ಷಿಪಣಿ ಮತ್ತು ಡ್ರೋನ್ಗಳನ್ನು ಉಡಾಯಿಸಿದೆ. ಸ್ಫೋಟದ ತೀವ್ರತೆಗೆ ಸ್ಥಾವರದ ಸೇವಾ ಕಟ್ಟಡವು ಸಂಪೂರ್ಣವಾಗಿ ಕುಸಿದಿದ್ದು, ಅಲ್ಲಿ ಕರ್ತವ್ಯದಲ್ಲಿದ್ದ ಭಾರತೀಯ ಮೂಲದ ತಾಂತ್ರಿಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಕುವೈತ್ನ ವಿದ್ಯುತ್ ಮತ್ತು ಜಲ ಸಚಿವಾಲಯದ ವಕ್ತಾರರಾದ ಫಾತಿಮಾ ಅಬ್ಬಾಸ್ ಜೌಹರ್ ಹಯಾತ್ ಅವರು ಈ ಸಾವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಮೃತರ ಹೆಚ್ಚಿನ ವಿವರಗಳನ್ನು ರಾಯಭಾರ ಕಚೇರಿಯ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತಿದೆ.ದಾಳಿಯ ಬೆನ್ನಲ್ಲೇ ಕುವೈತ್ ಸರ್ಕಾರವು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. “ಸಾರ್ವಜನಿಕರು ಆತಂಕಕ್ಕೊಳಗಾಗಬಾರದು, ಆದರೆ ಸುರಕ್ಷತೆಯ ದೃಷ್ಟಿಯಿಂದ ಅನಗತ್ಯವಾಗಿ ಮನೆಗಳಿಂದ ಹೊರಬರಬಾರದು” ಎಂದು ನಾಗರಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಸ್ತುತ ಸ್ಥಾವರದ ದುರಸ್ತಿ ಕಾರ್ಯಕ್ಕೆ ತಾಂತ್ರಿಕ ತಂಡಗಳನ್ನು ರವಾನಿಸಲಾಗಿದ್ದು, ವಿದ್ಯುತ್ ವ್ಯತ್ಯಯವಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಭಾರತೀಯ ವಲಸೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರಕ್ಕೆ ಈಗ ದೊಡ್ಡ ಸವಾಲು ಎದುರಾಗಿದೆ.