ನವದೆಹಲಿ ಎಪ್ರಿಲ್ 18: ವಿಶ್ವದ ಅತ್ಯಂತ ಸೂಕ್ಷ್ಮ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗುಗಳ ಮೇಲೆ ಗುಂಡು ಹಾರಿಸಿರುವ ಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ನವದೆಹಲಿಯಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿಕೊಂಡ ವಿದೇಶಾಂಗ ಇಲಾಖೆಯು ತನ್ನ “ತೀವ್ರ ಅಸಮಾಧಾನ ಮತ್ತು ಕಳವಳ”ವನ್ನು ವ್ಯಕ್ತಪಡಿಸಿದೆ.

ಲಾರಾಕ್ ದ್ವೀಪದ ಬಳಿಯ ಸಮುದ್ರ ಮಾರ್ಗದಲ್ಲಿ ಭಾರತೀಯ ಧ್ವಜ ಹೊಂದಿರುವ ಕನಿಷ್ಠ ಎರಡು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯಿಂದಾಗಿ ಹಡಗುಗಳು ಅನಿವಾರ್ಯವಾಗಿ ತಮ್ಮ ಪಥವನ್ನು ಬದಲಿಸಿ ಹಿಂತಿರುಗಬೇಕಾಯಿತು. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ನಾವಿಕರಿಗೆ ಗಾಯಗಳಾಗಿಲ್ಲ ಅಥವಾ ಹಡಗುಗಳಿಗೆ ಭಾರಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಶನಿವಾರ ಸಂಜೆ ಇರಾನ್ ರಾಯಭಾರಿಯೊಂದಿಗೆ ಸಭೆ ನಡೆಸಿದ ಭಾರತದ ವಿದೇಶಾಂಗ ಕಾರ್ಯದರ್ಶಿಯವರು, ನಾಗರಿಕ ಹಡಗುಗಳ ಮೇಲೆ ಗುಂಡು ಹಾರಿಸಿರುವುದು ಅಕ್ಷಮ್ಯ ಎಂದು ತಿಳಿಸಿದ್ದಾರೆ. “ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಂಚರಿಸುವ ಹಡಗುಗಳ ವಿರುದ್ಧ ಯಾವ ಕಾನೂನಿನ ಅಡಿಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ?” ಎಂದು ಭಾರತ ಪ್ರಶ್ನಿಸಿದೆ. ಅಲ್ಲದೆ, ನಾವಿಕರ ಮತ್ತು ವ್ಯಾಪಾರಿ ಹಡಗುಗಳ ಸುರಕ್ಷತೆಗೆ ಭಾರತ ನೀಡುವ ಆದ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳಲಾಗಿದೆ.
ಭಾರತದ ಕಳವಳಗಳನ್ನು ಆಲಿಸಿದ ಇರಾನ್ ರಾಯಭಾರಿ, ಈ ವಿಚಾರವನ್ನು ಕೂಡಲೇ ಟೆಹ್ರಾನ್ನಲ್ಲಿರುವ ತಮ್ಮ ಸರ್ಕಾರಕ್ಕೆ ತಿಳಿಸುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಭಾರತಕ್ಕೆ ಹೋಗುವ ಹಡಗುಗಳಿಗೆ ಸುರಕ್ಷಿತ ಮಾರ್ಗ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಿಶ್ವದ ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ ಕಳೆದ ಕೆಲವು ದಿನಗಳಿಂದ ಮಿಲಿಟರಿ ಚಟುವಟಿಕೆಗಳು ಹೆಚ್ಚಾಗಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಬೆಳಗ್ಗಿನಿಂದಲೇ ಭಾರತಕ್ಕೆ ಬರಬೇಕಿದ್ದ ಹಲವು ಹಡಗುಗಳು ಉದ್ವಿಗ್ನತೆಯ ಕಾರಣದಿಂದಾಗಿ ಜಲಸಂಧಿಯನ್ನು ದಾಟಲಾಗದೆ ಹಿಂತಿರುಗಿವೆ.