ಮಂಗಳೂರು, ಮೇ 31: ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಡಿ.ಕೆ.ಶಿವಕುಮಾರ್ ರವರು ಪ್ರಮಾಣವಚನ ಸ್ವೀಕರಿಸಲಿದ್ದು, ಜತೆಯಲ್ಲಿ ಸಚಿವ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಂದೆ ರಚನೆಯಾಗುವ ಮಂತ್ರಿ ಮಂಡಲದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕು ಎನ್ನುವುದು ಸಮಾಜದ ಮನವಿಯಾಗಿದೆ.
ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರು ಬಿಲ್ಲವ ಸಮಾಜದ ಅಗ್ರಗಣ್ಯ ನಾಯಕರು ಮತ್ತು ಹಿರಿಯ ಮುತ್ಸದ್ಧಿ ಮತ್ತು ಅನುಭವಿ ರಾಜಕಾರಣಿ. ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ ನ ವಿಪಕ್ಷ ನಾಯಕರಾಗಿ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ನ್ಯಾಯದ ಪರವಾಗಿ ಯಾವುದೇ ರಾಜಿಯಿಲ್ಲದೆ ಹೋರಾಡಿದವರು. ಜಾತ್ಯಾತೀತ ತತ್ವವನ್ನು ಪಾಲಿಸಿಕೊಂಡು ಬಂದವರು. ಬ್ರಹ್ಮಶ್ರೀ ನಾರಾಯಣ ಗುರುಗಳ ಅಪಾರ ಭಕ್ತರಾಗಿದ್ದು, ಅವರ ಸಂದೇಶಗಳನ್ನು ದಾರಿದೀಪವಾಗಿಟ್ಟು ಬೆಳೆದವರು. ಇತ್ತೀಚಿಗೆ ಬಹಳ ಅರ್ಥಪೂರ್ಣವಾಗಿ ಸರ್ವಸ್ಪರ್ಶಿಯಾಗಿ ನಡೆದ ಗುರು-ಗಾಂಧಿ ಸಂವಾದದ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಿರ್ವಹಿಸಿ ಜಿಲ್ಲೆಯ ಘನತೆಯನ್ನು ದೇಶಾದ್ಯಂತ ಪಸರಿಸಿದ ಅದ್ಭುತ ಸಂಘಟಕ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವರು ಬಹುಸಂಖ್ಯಾತರು, ಆದರೆ ರಾಜಕೀಯದಲ್ಲಿ ಸ್ಥಾನಮಾನದಲ್ಲಿ ಸದರಿ ಅನುಪಾತದಂತೆ ಮಾನ್ಯತೆ ದೊರೆಯದಿರುವುದು ವಿಷಾದನೀಯ. ಆದ್ದರಿಂದ ಮುಂದೆ ರಚನೆಯಾಗುವ ಸಚಿವ ಮಂಡಲದ ಬಿ.ಕೆ.ಹರಿಪ್ರಸಾದ್ ರವರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಅಖಿಲ ಭಾರತ ಬಿಲ್ಲವ ಸಮಾಜದ ಒಕ್ಕೊರಲಿನ ಆಗ್ರಹವಾಗಿದೆ.
ನಾಯಕರಾದ ಶೋಷಿತ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕಯಿಂದ ಶ್ರಮಿಸುತ್ತಿರುವ ನಾಯಕರಲ್ಲಿ ಹರಿಪ್ರಸಾದ್ ಹಿಂದುಳಿದ ಸಮಾಜದ ಪ್ರಮುಖರು. ಮಂತ್ರಿ ಮಂಡಲದಲ್ಲಿ ಅವರ ಉಪಸ್ಥಿತಿ ಉತ್ತಮ ಸಂಸದೀಯ ಪಟುವಿನ ಸ್ಥಾನವನ್ನು ಪಡೆಯಲಿದೆ. ಆದ್ದರಿಂದ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕಾಗಿ ವಿನಂತಿ ಎಂದು ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಪೀಠಾಧಿಪತಿಗಳು, ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು ಮಠ ತಿಳಿಸಿದ್ದಾರೆ.