ಮಂಗಳೂರು ಸೆಪ್ಟೆಂಬರ್ 12: ಮಂಗಳೂರು ಪೊಲೀಸರು ಹಳೆಯ ಪ್ರಕರಣಗಳ ಆರೋಪಿಗಳನ್ನು ಅರೆಸ್ಟ್ ಮಾಡುವ ಕೆಲಸವನ್ನು ಮುಂದುವರೆಸಿದ್ದು, ಇದೀಗ 2017ರಲ್ಲಿ ಉರ್ವ ಠಾಣೆಯ ಪೊಲೀಸ್‌ ಅಧಿಕಾರಿ ಮೇಲೆ ಕೊಲೆಗೆ ಯತ್ನಿಸಿ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌


ನಿಯಾಜ್‌ ಅಲಿಯಾಸ್‌ ನಿಯಾ ಆರೋಪಿ. 2017ರ ಏಪ್ರಿಲ್‌ನಲ್ಲಿ ಲೇಡಿಹಿಲ್ ಸರ್ಕಲ್ ಬಳಿ ಎಎಸ್‌ಐ ಬೈಕ್‌ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ತಡೆದು ರಾಡ್‌ ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತ ಜಾಮೀನು ಮೇಲೆ ಬಿಡುಗಡೆಗೊಂಡು, ಕೋರ್ಟ್‌ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಪೊಲೀಸರು ಗುರುವಾರ ಬೆಳಗಿನ ಜಾವ ಬೆಂಗಳೂರಿನ ಹುಳಿಮಾವು ಅರಕೆರೆ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಮಂಗಳೂರು, ಉಡುಪಿ ಜಿಲ್ಲೆಯ ಬೇರೆ ಬೇರೆ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, ಬೇರೆ ಬೇರೆ ನ್ಯಾಯಾಲಯಗಳಲ್ಲಿ ಈತನ ವಿರುದ್ಧ ವಾರೆಂಟ್‌ ಹೊರಡಿಸಲಾಗಿದೆ.

Share Information