ಬೆಂಗಳೂರು ,ಏಪ್ರಿಲ್ 22: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರ ತೀವ್ರ ನಿರ್ಲಕ್ಷ್ಯದಿಂದ ಶಾ ನವಾಜ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿ, ಹೊಲಿಗೆ ಹಾಕದೆ ಡಿಸ್ಚಾರ್ಜ್ ಮಾಡಿದ್ದರಿಂದ, ಚಿಕಿತ್ಸೆ ಸಿಗದೆ ಫುಟ್ಪಾತ್ನಲ್ಲೇ ನರಳಿ ಪ್ರಾಣ ಬಿಟ್ಟಿದ್ದಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಾ ನವಾಜ್ (45) ಎಂಬುವವರು ಮರ್ಮಾಂಗದ ಗಡ್ಡೆ ನಿವಾರಣೆಗಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ತೆಗೆಯಲಾಗಿತ್ತು. ಆಪರೇಷನ್ ವಿಭಾಗದ ಸಿಬ್ಬಂದಿ ಶಾ ನವಾಜ್ ಅವರ ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಅದಾದ ಬಳಿಕ ಮುಂದಿನ ಚಿಕಿತ್ಸೆಗಾಗಿ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಇಲ್ಲಿಂದಲೇ ಅಸಲಿ ಆಟ ಶುರುವಾಗಿದ್ದು, ಎರಡು ವಿಭಾಗಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ರೋಗಿ ನರಕಯಾತನೆ ಅನುಭವಿಸುವಂತಾಯಿತು. “ಗಾಯ ಇನ್ನೂ ಆರಿಲ್ಲ, ಈಗಲೇ ಪ್ಲಾಸ್ಟಿಕ್ ಸರ್ಜರಿ ಸಾಧ್ಯವಿಲ್ಲ” ಎಂದು ಹೇಳಿ ಸರ್ಜರಿ ವಿಭಾಗದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಇತ್ತ ತುರ್ತು ವಿಭಾಗದ ಸಿಬ್ಬಂದಿ, ಶಸ್ತ್ರಚಿಕಿತ್ಸೆಯ ಗಾಯಕ್ಕೆ ಕನಿಷ್ಠ ಹೊಲಿಗೆಯನ್ನೂ ಹಾಕದೆ ರೋಗಿಯನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಡ ಹೇರಿದ್ದಾರೆ. ರಕ್ತ ಸೋರುತ್ತಿದ್ದ ಸ್ಥಿತಿಯಲ್ಲೇ ರೋಗಿಯನ್ನು ಹೊರಹಾಕಲಾಗಿದ್ದು, ಅಸಹಾಯಕ ಪತ್ನಿ ತನ್ನ ಪತಿಯನ್ನು ಆಸ್ಪತ್ರೆಯ ಆವರಣದ ಫುಟ್ಪಾತ್ ಮೇಲೆಯೇ ಮಲಗಿಸಿಕೊಂಡು ಮೂರು ದಿನಗಳ ಕಾಲ ಚಿಕಿತ್ಸೆಗಾಗಿ ಅಂಗಲಾಚಿದ್ದಾರೆ.
ಮರ್ಮಾಂಗದ ತೀವ್ರ ನೋವು ಹಾಗೂ ರಕ್ತಸ್ರಾವದಿಂದ ನರಳಿದ ನವಾಜ್, ಬುಧವಾರ ಫುಟ್ಪಾತ್ ಮೇಲೆಯೇ ಕೊನೆಯುಸಿರೆಳೆದಿದ್ದಾರೆ. ಮೃತರ ಪತ್ನಿ ಹಾಗೂ ನಾಲ್ವರು ಅಪ್ರಾಪ್ತ ಮಕ್ಕಳು ಈಗ ಬೀದಿಗೆ ಬಿದ್ದಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.