
ಬೆಂಗಳೂರು, ಸೆಪ್ಟೆಂಬರ್ 10: ವಿವಾದಿತ ಹೇಳಿಕೆಗೆ ಹೆಸರುವಾಸಿಯಾಗಿರುವ ‘ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಗೋಮಾಂಸ ಸೇವನೆಗೆ ಸಂಬಂಧಿಸಿದಂತೆ ಅಗ್ನಿಹೋತ್ರಿ ನೀಡಿರುವ ಹೇಳಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ‘ಎಲ್ಲಿ ಉತ್ತಮ ಗೋಮಾಂಸ ಸಿಗುವುದೆಂದು ಹಿಂದೆ ಬರೆದಿದ್ದೆ. ನಾನು ಅದನ್ನು ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ. ನನ್ನ ಬದುಕಲ್ಲಿ ಏನೂ ಬದಲಾಗಿಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ವಿಡಿಯೊದಲ್ಲಿ ಹೇಳಿದ್ದಾರೆ. ಇದು ಹಳೆಯ ವಿಡಿಯೊ ಎನ್ನಲಾಗಿದೆ.
ರಣಬೀರ್ ಕಪೂರ್ ಈ ಹಿಂದೆ ಹೇಳಿದ್ದ ವಿಡಿಯೋದಲ್ಲಿ ಗೋಮಾಂಸ ತಿನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಅದನ್ನೇ ಇಟ್ಟುಕೊಂಡು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು. ಇದೀಗ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ‘ನಾನು ಈ ಹಿಂದೇನೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’ ಎಂದು ಹೇಳಿರುವ ಮಾತಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದಾ ಹಿಂದೂಪರ ಯೋಚನೆ ಮಾಡುವ ವಿವೇಕ್ ಬಗ್ಗೆ ಭಜರಂಗ ದಳ ಯಾಕೆ ಸುಮ್ಮನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ
https://twitter.com/imvengeance24/status/1567403442125303808
ಗೋಮಾಂಸ ತಿನ್ನುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾಗಳನ್ನು ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವುದೇ ದೇವಸ್ಥಾನದ ಒಳಗೆ ಬಿಡಕೂಡದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ರಣಬೀರ್ ಪರ ನಿಂತಿದ್ದ ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.
ಕೇವಲ ರಣಬೀರ್ ಗಷ್ಟೇ ಈ ಬಿಸಿ ತಾಗಬಾರದು, ವಿವೇಕ್ ಅಗ್ನಿಹೋತ್ರಿ ಮೇಲೂ ಕ್ರಮ ಆಗಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ವಿಡಿಯೋ ವೈರಲ್ ಆಗುತ್ತಿದ್ದರೂ, ಆ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





