ಹುಬ್ಬಳ್ಳಿ ಎಪ್ರಿಲ್ 24: : ಆನ್ಲೈನ್ ಗೇಮ್ಗೆ ದಾಸನಾಗಿದ್ದ 14 ವರ್ಷದ ಬಾಲಕನೊಬ್ಬ, ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಘಟನೆ ನಗರದ ಉದಯನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಸಮರ್ಥ್ (14) ಮೃತಪಟ್ಟ ಬಾಲಕ.

ಉದಯನಗರ ನಿವಾಸಿಯಾದ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ನಂತಹ ಆನ್ಲೈನ್ ಗೇಮ್ಗಳಿಗೆ ವಿಪರೀತವಾಗಿ ಅಡಿಕ್ಟ್ ಆಗಿದ್ದನು. ಗುರುವಾರ ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿ, ಓದಿನತ್ತ ಗಮನಹರಿಸುವಂತೆ ತಿಳಿಸಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ನೊಂದ ಬಾಲಕ ತನ್ನ ಕೋಣೆಗೆ ಹೋಗಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, “ಮಕ್ಕಳು ಮೊಬೈಲ್ ವ್ಯಸನಕ್ಕೆ ಒಳಗಾದಾಗ ಏಕಾಏಕಿ ಅವರಿಂದ ಮೊಬೈಲ್ ಕಿತ್ತುಕೊಳ್ಳಬಾರದು. ಬದಲಾಗಿ ತಜ್ಞರ ಅಥವಾ ಶಿಕ್ಷಕರ ನೆರವಿನೊಂದಿಗೆ ನಿಧಾನವಾಗಿ ಅವರನ್ನು ಆ ಚಟದಿಂದ ಹೊರತರುವ ಪ್ರಯತ್ನ ಮಾಡಬೇಕು. ಮೊಬೈಲ್ ಅನ್ನು ರಚನಾತ್ಮಕ ಉದ್ದೇಶಗಳಿಗೆ ಬಳಸುವಂತೆ ಮಕ್ಕಳಿಗೆ ತಿಳಿಹೇಳಬೇಕು,” ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ.